ನಿಡಗುಂದಿ (ವಿಜಯಪುರ ಜಿಲ್ಲೆ): ‘ಅಭಿನಯ ಬಾರದ ನಾನು, ರಾಜಕೀಯ ಎಂಬ ನಾಟಕದಲ್ಲಿ ದುರಂತ ನಾಯಕನಾದೆ’ ಎಂದು ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಇಲ್ಲಿ ಹೇಳಿದರು.
ನೇರ ನಡೆ–ನುಡಿಯಿಂದಾಗಿ ಬಸನಗೌಡ ಪಾಟೀಲ ಯತ್ನಾಳ ಮತ್ತು ತಾವು ಕೆಲ ದಿಗ್ಗಜರ ವೈರತ್ವ ಕಟ್ಟಿಕೊಂಡು ರಾಜಕೀಯ ವನವಾಸ ಅನುಭವಿಸುತ್ತಿರುವುದಾಗಿ ಹೇಳಿದ ಅವರು, ನಾಟಕದ ಒಳಿತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೇ ವಿನಾ ಬದುಕೇ ನಾಟಕವಾಗಬಾರದು ಎಂದರು.
‘ನಮ್ಮ ಪಾತ್ರ ಮುಗಿದೇ ಹೋಯಿತೆಂದು ಕೆಲವರು ಖುಷಿಪಟ್ಟಿದ್ದಾರೆ. ನೈಜ ಕಥೆ ಇನ್ನು ಮುಂದಷ್ಟೇ ಆರಂಭವಾಗಲಿದೆ. ಕಾದು ನೋಡಿ’ ಎಂದು ವಿಧಾನ ಪರಿಷತ್ ಸದಸ್ಯ ಯತ್ನಾಳ ಹೇಳಿದರು.
ಸಮೀಪದ ತೆಲಗಿ ಗ್ರಾಮದ ಮಾರುತೇಶ್ವರ ಜಾತ್ರಾ ಉತ್ಸವದಲ್ಲಿ ಸೋಮವಾರ ರಾತ್ರಿ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಇವರಿಬ್ಬರೂ ಭಾಗವಹಿಸಿದ್ದರು.
ದೇವರ ಹಿಪ್ಪರಗಿಯಿಂದ ಸ್ಪರ್ಧೆ?
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಈ ಬಾರಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಇದೇ ಸಂದರ್ಭದಲ್ಲಿ ಕೇಳಿ ಬಂತು. ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ರೆಡ್ಡಿ ಮುಗುಳ್ನಕ್ಕರು.