ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಆಗರ ಸೊಂಪೂರು ಗ್ರಾಮ

Last Updated 2 ಜನವರಿ 2018, 7:04 IST
ಅಕ್ಷರ ಗಾತ್ರ

ಮಂಜುನಾಥ ಎಸ್‌.ಅಂಗಡಿ

ಕುಕನೂರು: ಗ್ರಾಮದಲ್ಲಿ ಹದಗೆಟ್ಟ ರಸ್ತೆ, ಚರಂಡಿಯಲ್ಲಿ ಕಸ-ಕಡ್ಡಿ ಕಟ್ಟಿ ಹರಿಯದ ಕೊಳಚೆ ನೀರು, ಗ್ರಾಮದಲ್ಲಿ ಸ್ವಚ್ಛತೆ ಕೊರತೆ, ಕುಡಿಯಲು ಕೆರೆ ನೀರು. ಹೌದು. ಪಟ್ಟಣದ ಸಮೀಪ ಸೊಂಪೂರು ಗ್ರಾಮಕ್ಕೆ ಬಂದವರಿಗೆ ತಕ್ಷಣ ಕಾಣವು ದೃಶ್ಯ.

ಚರಂಡಿ ಸಮಸ್ಯೆ: ದಲಿತ ಕಾಲೊನಿಯಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸದ ಕಾರಣ ಕೊಳಚೆ ನೀರು ನಿಂತು ರಸ್ತೆಯಲ್ಲಿ ಮೇಲೆ ಹರಿಯುತ್ತದೆ. ಕೆಲವು ಕಡೆ ಚರಂಡಿಯೇ ಇಲ್ಲದ ಕಾರಣ ನೈರ್ಮಲ್ಯದ ಸಮಸ್ಯೆ ತಾಂಡವಾಡುತ್ತಿದೆ. ಸುಮಾರು 500 ಮನೆಗಳ 4,000 ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಬಸ್ ನಿಲ್ದಾಣವಿಲ್ಲ.

‌ಆಸ್ಪತ್ರೆ ಇಲ್ಲ: ಗ್ರಾಮದಲ್ಲಿ ಆಸ್ಪತ್ರೆಯೂ ಇಲ್ಲ, ಖಾಸಗಿ ವೈದ್ಯರು ಸಹ ಗ್ರಾಮಕ್ಕೆ ಬರುವುದಿಲ್ಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಪಕ್ಕದ ಇಟಗಿ ಆರೋಗ್ಯ ಕೇಂದ್ರಕ್ಕೆ ಬರಬೇಕು. ಅಲ್ಲಯೂ ವೈದ್ಯರಿರುವುದು ಅಪರೂಪ. ಹೀಗಾಗಿ ಚಿಕಿತ್ಸೆ ಪಡೆಯಬೇಕಾದರೆ, ಕುಕನೂರು ಅಥವಾ ಕೊಪ್ಪಳಕ್ಕೆ ಹೋಗಬೇಕು. ಅಪಘಾತ, ಹೆರಿಗೆಯಂತಹ ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ವಾಹನಗಳಿಲ್ಲದೇ ಪರದಾಡುವ ಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.‌

ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ: ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿ ಬಹಳ ದಿನವಾಗಿದೆ. ಆರಂಭಿಸುವುದಾಗಿ ಕೇವಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಈಡೇರಿಸಿಲ್ಲ. ಕುಡಿಯಲು ಕೆರೆಯ ನೀರೇ ಗತಿ ಎನ್ನುತ್ತಾರೆ ರಾಮಪ್ಪ.

ಶಾಲೆ ಇದೆ, ಕೊಠಡಿ ಕೊರತೆ: ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಇದೆ. ಒಂದೇ ಕೊಠಡಿ ಯ ಲ್ಲಿ ಎರಡು ತರಗತಿಗಳನ್ನ ನಡೆಸಲಾಗುತ್ತಿದೆ ಎಂದು ಗ್ರಾಮದ ಯುವಕ ಬಸವರಾಜ ಹೇಳಿದರು. ದುರಸ್ತಿ ಕಾಣದ ರಸ್ತೆಗಳು: ಸೋಂಪೂರ ಮಾರ್ಗವಾಗಿ ತಿಮ್ಮಾಪೂರ, ಗದಗಿಗೆ ತೆರಳುವ ರಸ್ತೆ ದುರಸ್ತಿಗೆ ಕಾಯುತ್ತಿದೆ. ರಸ್ತೆಯಲ್ಲಿ ಗುಂಡಿಗಳಿಂದ ಕೊಡಿದೆ.

ಸಿದ್ನೇಕೊಪ್ಪ ರಸ್ತೆ ಸೇರುವ ರಸ್ತೆಯಲ್ಲಿ ಬದಿಗಳಲ್ಲಿಉಮುಳ್ಳು ಗಿಡಗಳು, ಜಾಲಿಗಿಡಗಳು ಬೆಳೆದು ನಿಂತಿವೆ. ಗಿಡಗಳಿಂದ ರಸ್ತೆ ಕಿರಿದಾಗಿದ್ದು, ಎದುರು ಬರುವ ವಾಹನಗಳು ಕಾಣದಂತೆ ಆಗಿದೆ. ಸರ್ಕಾರ ಸ್ವಚ್ಛ ಭಾರತ ಅಭಿಯಾನ ಅಡಿ ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಾಣಕ್ಕೆ ಹಣ ಮಂಜೂರು ಮಾಡುತ್ತಿದೆ. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

‘ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರು ಅಧಿಕಾರಿ ಗಳನ್ನು ಕರೆತಂದು ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸುತ್ತಾರೆ. ಆದರೆ, ಸೂಚನೆ ಪಾಲನೆ ಆಗುವುದಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

* * 

ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ
ಬಸವರಾಜ ಎಚ್‌. ಹಿರೇಮನಿ
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT