ಉಡುಪಿ: ‘ವಿದ್ಯಾರ್ಥಿಗಳಿಗೆ ಪದವಿ ಜತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಾಗ ಮಾತ್ರ ಅದು ಒಂದು ಪರಿಪೂರ್ಣ ಶಿಕ್ಷಣ ಸಂಸ್ಥೆ ರೂಪುಗೊಳ್ಳಲು ಸಾಧ್ಯ’ ತೆಂಕನಿ ಡಿಯೂರು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಹೆಗ್ಡೆ ಅಭಿಪ್ರಾಯಪಟ್ಟರು.
ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾ ಉದ್ಯೋಗ ವಿನಮಯ ಕೇಂದ್ರದ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಉದ್ಯೋಗ ಮೇಳ 2017ನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ಕೇಂದ್ರಗಳಾಗಿ ಉಳಿದಿವೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ನಗರಗಳಿಗೆ ತೆರಳಿ ಸಂದರ್ಶನ ನೀಡುವುದು ಕಷ್ಟ ಸಾಧ್ಯ . ಬಾಲ್ಯದಿಂದಲೆ ಅದೇ ಊರಿನಲ್ಲಿ ಬೆಳೆದವರಿಗೆ ಪ್ರಾರಂಭಿಕ ಹಂತದಲ್ಲಿ ಉದ್ಯೋಗವನ್ನು ಅರಸಿಕೊಂಡು ದೂರದ ನಗರಕ್ಕೆ ತೆರಳಲು ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ತಮ್ಮಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಉದ್ಯೋಗಾವಕಾಶ ಕಲ್ಪಿಸುವುದು ಉತ್ತಮ ಎಂದು ಸಲಹೆ ನೀಡಿದರು.
ಉದ್ಯೋಗ ಮೇಳದಲ್ಲಿ ಉಡುಪಿ ಜಿಲ್ಲೆಯ ಪದವಿ ಕಾಲೇಜಿನಿಂದ ಬಂದಿದ 609 ಉದ್ಯೋಗಾಕಾಂಕ್ಷಿಗಳಲ್ಲಿ ಸುಮಾರು 238 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉದ್ಯೋಗ ಮೇಳದಲ್ಲಿ ರಾಜ್ಯದ 11 ಕಂಪೆನಿ ಭಾಗವಹಿಸಿದ್ದವು.
ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ರಾಜೇಂದ್ರ ನಾಯಕ, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್, ತರಬೇತುದಾರ ಜಗತ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಜೆ.ಎಸ್. ಉಷಾದೇವಿ , ಸಂಚಾಲಕ ಎಂ ಗಣೇಶ್ ಪೈ ಉದ್ಯಮಿ ಜಯಪ್ರಕಾಶ ಶೆಟ್ಟಿ ಇದ್ದರು.
ಪದವಿ ವಿಭಾಗದ ಸಂಚಾಲಕ ಎ. ಸುಬ್ರಮಣ್ಯ ಸ್ವಾಗತಿಸಿದರು, ಎಚ್.ಸಂತೋಷ ನಾಯ್ಕ ವಂದಿಸಿದರು.