ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ಹೊಸದಾಗಿ 5 ಹೆಚ್ಚುವರಿ ನಿಬಂಧಕರು ಸೇರಿ 20 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ತಿಳಿಸಿದರು.
ಲೋಕಾಯುಕ್ತ ಪೊಲೀಸ್ ಸಿಬ್ಬಂದಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಚುವರಿ ನಿಬಂಧಕರಿಗೆ ಅಗತ್ಯ ಇರುವ ಗ್ರೂಪ್ ‘ಡಿ’, ಪ್ರಥಮ ದರ್ಜೆ ಸಹಾಯಕರು ಮತ್ತು ತೀರ್ಪು ಬರಹಗಾರರ ತಲಾ 5 ಹುದ್ದೆಗಳನ್ನೂ ಮಂಜೂರು ಮಾಡಿದೆ ಎಂದರು.
ಸಂಸ್ಥೆಯಲ್ಲಿ ಇಲಾಖಾ ವಿಚಾರಣೆಯ 3034 ಪ್ರಕಣಗಳು ಬಾಕಿ ಇದ್ದು, 2017ರಲ್ಲಿ 841 ಹೊಸ ಪ್ರಕರಣಗಳು ದಾಖಲಾಗಿವೆ. ಇವುಗಳ ತ್ವರಿತ ವಿಲೇವಾರಿಗೆ ಈಗಿರುವ 11 ಹೆಚ್ಚುವರಿ ನಿಬಂಧಕರ ಜೊತೆಗೆ 9 ಹುದ್ದೆಗಳನ್ನು ಮಂಜೂರು ಮಾಡಲು ಕೋರಲಾಗಿತ್ತು ಎಂದು ಹೇಳಿದರು.
ಲಂಚ ಪ್ರಕರಣಗಳು ಮಾತ್ರವಲ್ಲದೆ ಸರ್ಕಾರ ಯೋಜನೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿವೆಯೇ ಎಂಬುದನ್ನೂ ಲೋಕಾಯುಕ್ತ ಸಂಸ್ಥೆ ಪರಿಶೀಲಿಸುತ್ತಿದೆ. ಇಂದಿರಾ ಕ್ಯಾಂಟೀನ್ನಲ್ಲಿ ಆಹಾರದ ಗುಣಮಟ್ಟವನ್ನು ಲೋಕಾಯುಕ್ತ ಸಿಂಬ್ಬಂದಿ ಗೌಪ್ಯವಾಗಿ ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಎರಡು ವರದಿಗಳನ್ನು ನೀಡಿದ್ದಾರೆ ಎಂದು ಹೇಳಿದರು.