ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಣಕಾಸಿನ ಕೊರತೆ: ಸಿ.ಎಂ

Last Updated 7 ಜನವರಿ 2018, 9:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಆರು ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಹಣಕಾಸಿನ ಲಭ್ಯತೆ ಕೊರತೆಯಿಂದಾಗಿ ಈ ವರ್ಷ ಕಾಲೇಜುಗಳ ಸ್ಥಾಪನೆ ಸಾಧ್ಯವಾಗುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ರಾಜ್ಯದಲ್ಲಿ ಐದು ಕೃಷಿ ವಿಶ್ವವಿದ್ಯಾಲಯಗಳು, ಒಂದು ತೋಟಗಾರಿಕೆ ವಿಶ್ವವಿದ್ಯಾಲಯ ಇದೆ. ಮೂಡಿಗೆರೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವ ಅಗತ್ಯ ಇದೆಯೇ ಎಂಬ ಕುರಿತು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಉತ್ತರಿಸಿದರು.

‘ವಿಧಾನಸಭೆ ಚುನಾವಣೆಯು ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಯಡಿಯೂರಪ್ಪ, ಮೋದಿ, ಅಮಿತ್‌ ಷಾ ಎಂಬುದಲ್ಲ. ಜಾತ್ಯತೀತವಾದ ಮತ್ತು ಕೋಮುವಾದ ಸಿದ್ಧಾಂತಗಳ ನಡುವಿನ ಸ್ಪರ್ಧೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಸ್ಪರ್ಧೆ. ಕಾಂಗ್ರೆಸ್‌ ಜಾತ್ಯತೀತ ಪಕ್ಷ. ನಾವು ಜಾತ್ಯತೀತವಾದ, ಸಾಮಾಜಿಕ ನ್ಯಾಯ, ಸಮಾನತೆಗೆ ಕಟೀಬದ್ಧರಾಗಿದ್ದೇವೆ. ಬಿಜೆಪಿ ಒಂದು ಕೋಮುವಾದಿ ಪಕ್ಷ’ ಎಂದರು.

‘ಸಿದ್ದರಾಮಯ್ಯ ಅವರದ್ದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಆಧಾರರಹಿತವಾಗಿ ವಿರೋಧ ಪಕ್ಷದವರು ಮಾಡುವ ಆರೋಪಗಳನ್ನು ಕೇಳಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಜೈಲಿಗೆ ಹೋಗಿದ್ದವರು, ಅವರಿಗೆ ಇಂಥ ಆರೋಪಗಳನ್ನು ಮಾಡಲು ನೈತಿಕ ಹಕ್ಕಿಲ್ಲ ಎಂದು ನಾನು ಹೇಳಿದರೆ ತಪ್ಪೇನಿದೆ. ವೈಯುಕ್ತಿಕವಾಗಿ ನಾನೂ ಯಾರನ್ನೂ ಟೀಕೆ ಮಾಡುವುದಿಲ್ಲ’ ಎಂದರು.

‘ಆರ್‌ಎಸ್‌ಎಸ್‌ ಅಥವಾ ಇನ್ನಾವುದೇ ಸಂಘಟನೆಗಳನ್ನು ನಿಷೇಧ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಕೋಮುಭಾವನೆ ಕೆರಳಿಸುವ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದೆ’ ಎಂದು ಸ್ಪಷ್ಟಪಡಿಸಿದರು.

‘ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಳಚರಂಡಿ, ಕೆರೆ ಅಭಿವೃದ್ಧಿ, ಇತರ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌ ಪರಿಶೀಲನೆ ಮಾಡಿದ್ದಾರೆ. ಕಾಮಗಾರಿಗಳ ಬಗ್ಗೆ ತನಿಖೆಯಾಗಬೇಕು ಎಂದು ಸಚಿವರು ತಿಳಿಸಿದ್ದಾರೆ. ತನಿಖೆ ಮಾಡಿಸಲಾಗುವುದು’ ಎಂದು ಹೇಳಿದರು.

‘ಅಕ್ರಮ ಗಣಿಗಾರಿಕೆಯ ನಷ್ಟವಾಗಿರುವುದಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೆ. ವಿಶೇಷ ತನಿಖಾ ದಳವು (ಎಸ್‌ಐಟಿ) ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿದೆ. ಒತ್ತುವರಿ ಜಮೀನನ್ನು ಭೋಗ್ಯಕ್ಕೆ(ಲೀಸ್‌) ನೀಡಬೇಕು ಎಂದು ಈ ಭಾಗದ ಸಾಗುವಳಿದಾರರು ಬೇಡಿಕೆ ಇಟ್ಟಿದ್ದಾರೆ. ಕೇರಳ ಮಾದರಿ ವ್ಯವಸ್ಥೆ ಜಾರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಕೇರಳದಿಂದ ವರದಿಯನ್ನು ತರಿಸಿಕೊಂಡು ಪರಿಶೀಲಿಸಿ, ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಉತ್ತರಿಸಿದರು.

‘ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ರಾಜ್ಯ ಸರ್ಕಾರದ ಆಡಳಿತ, ಸಾಧನಾ ಸಮಾವೇಶಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಾವು ಯಾವುದೇ ತಂತ್ರಗಾರಿಕೆ ಮಾಡುತ್ತಿಲ್ಲ. ಅದನ್ನೆಲ್ಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಬಿಟ್ಟಿದ್ದೇವೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ವಿವಿಧ ಪ್ರಕ್ರಿಯೆಗಳಿವೆ. ಸ್ಕ್ರೀನಿಂಗ್‌ ಸಮಿತಿ, ರಾಜ್ಯ ಚುನಾವಣೆ ಸಮಿತಿ, ರಾಷ್ಟ್ರ ಚುನಾವಣೆ ಸಮಿತಿ ಪ್ರಕ್ರಿಯೆ ಮುಗಿದ ನಂತರ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಮುಂದಿನ ಐದು ವರ್ಷದ ಪ್ರಣಾಳಿಕೆ ಮತ್ತು ಸರ್ಕಾರದಿಂದ ‘ವಿಷನ್‌–2025’ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇವೆರಡನ್ನು ಆಧರಿಸಿ ಹೊಸ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT