ಹಿರಿಯ ನೃತ್ಯ ಗುರುಗಳಾದ ಗೀತಾ ಬಾಲಿ ಮತ್ತು ನರ್ಮದಾ ಅವರ ಬಳಿ ನೃತ್ಯಾಭ್ಯಾಸ ಮಾಡಿದ್ದ ಅಂಜನಾ ಅವರು ಪ್ರಸ್ತುತ ಡಾ.ಸೌಂದರ್ಯ ಶ್ರೀವತ್ಸ ಅವರಲ್ಲಿ ಕಲಿಕೆ ಮುಂದುವರಿಸಿದ್ದಾರೆ. ‘ನೃತ್ಯ ಮುನ್ನುಡಿ’ಗೆ ಸೌಂದರ್ಯ ಶ್ರೀವತ್ಸ ಅವರ ನಟುವಾಂಗ, ಡಿ.ಎಸ್. ಶ್ರೀವತ್ಸ ಅವರ ಗಾಯನ, ಸುಮಾರಾಣಿ ಅವರ ಸಿತಾರ್ ವಾದನವಿತ್ತು. ಕದಿಯೋತ್ಕಾಂತಿ ರಾಗ ಮತ್ತು ಆದಿತಾಳದಲ್ಲಿ ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮ ಶುರು ಮಾಡಿದ ಅಂಜನಾ, ಗಣೇಶನ ಶ್ಲೋಕದ ನಂತರ ದೇವಿಸ್ತುತಿಗೆ ನರ್ತಿಸಿದರು. ಮಂಗಳಕ್ಕೆ ಬದಲು ರಾಷ್ಟ್ರಕವಿ ಕುವೆಂಪುರವರ ಒಂದು ಕವಿತೆಯನ್ನು ಸಂದರ್ಭೋಚಿತವಾಗಿ ಬಳಸಿಕೊಂಡರು. ‘ಮುಚ್ಚುಮರೆ ಇಲ್ಲದೆ ನಿನ್ನ ಮುಂದೆಲ್ಲವನೂ ಬಿಚ್ಚಿಡುವೆ ಓ ಗುರುವೇ ಅಂತರಾತ್ಮ’ ಎಂಬ ಸಾಲಿಗೆ ತನ್ಮಯತೆಯಿಂದ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.