ಮೈಸೂರು: ತಾಮ್ರದ ಪಾತ್ರೆ ವ್ಯಾಪಾರಿ ಸುನೀಲ್ ಅವರ ಮನೆಯಿಂದ ₹ 23 ಲಕ್ಷ ನಗದು ಹಾಗೂ ₹ 6 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಲಾಕರ್ ಹೊತ್ತೊಯ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದು, ಆರೋಪಿಗಳಾದ ತಂದೆ ಮತ್ತು ಮಗನನ್ನು ಬಂಧಿಸಿದ್ದಾರೆ.
ಬನ್ನಿಮಂಟಪದ ರಿಯಾಜ್ ಷರೀಫ್ (42) ಹಾಗೂ ಈತನ ಪುತ್ರ ಫಯಾಜ್ ಷರೀಫ್ (22) ಬಂಧಿತರು. ಪಟ್ಟೆಗಾರ್ ಬೀದಿಯ ತಾಮ್ರದ ವ್ಯಾಪಾರಿ ಸುನೀಲ್ ಎಂಬುವರ ಮನೆಯಲ್ಲಿ ಡಿ.31ರಂದು ಲಾಕರ್ ಹೂತ್ತೊಯ್ದಿದ್ದರು.
ಸುನೀಲ್ ಅವರು ಮನೆಯ ಬೀಗ ಹಾಕಿಕೊಂಡು ಕೀಲಿಯನ್ನು ಬಾಗಿಲ ಮೇಲಿಟ್ಟು ಮೇಲುಕೋಟೆಗೆ ತೆರಳಿದ್ದರು. ಇದನ್ನು ಗಮನಿಸಿದ ರಿಯಾಜ್ ಮನೆಯ ಬೀಗ ತೆಗೆದು ಕಳವು ಮಾಡಿದ್ದನು. ಹಣ ಮತ್ತು ಚಿನ್ನಾಭರಣ ತೆಗೆದುಕೊಂಡು ಲಾಕರ್ ಅನ್ನು ದಳವಾಯಿ ಕೆರೆಯಲ್ಲಿ ಎಸೆದು ನಂಜನಗೂಡಿಗೆ ಪರಾರಿಯಾಗಿದ್ದನು.