ಬೆಂಗಳೂರು: ಜಯನಗರದ 8ನೇ ಬ್ಲಾಕ್ನಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಪಾದಚಾರಿ ಮಾರ್ಗವನ್ನು ಅಗೆದು ಮತ್ತೆ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಈ ಮಾರ್ಗವನ್ನು ನಿರ್ಮಿಸಲಾಗಿತ್ತು. ಸುಸ್ಥಿತಿಯಲ್ಲಿ ಇದ್ದರೂ ಅದನ್ನು ಕಿತ್ತು ಹೊಸದಾಗಿ ನಿರ್ಮಿಸಲಾಗುತ್ತಿದೆ ಎಂದು ದೂರಿದ್ದಾರೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪಾದಚಾರಿ ಮಾರ್ಗಕ್ಕೆ ಹಾನಿ ಉಂಟಾಗಿತ್ತು. ಸಾಕಷ್ಟು ತೇಪೆಗಳನ್ನು ಹಾಕಲಾಗಿತ್ತು. ಈ ಮಾರ್ಗದಲ್ಲಿರುವ ಕಾಲುವೆಯ ಹೂಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಜೈನ್ ಪ್ರಕೃತಿ ಅಪಾರ್ಟ್ಮೆಂಟ್ ಸಮುಚ್ಚಯದ ಪ್ರಧಾನ ವ್ಯವಸ್ಥಾಪಕಿ ಸುಷ್ಮಾ ಸುರೇಶ್ ತಿಳಿಸಿದರು.
ಹಲವು ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಇದರಿಂದ ನಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೀದಿಬದಿ ವ್ಯಾಪಾರಿ ನಂಜೇಗೌಡ ಅವರು ಅಳಲು ತೋಡಿಕೊಂಡರು.
ಈ ಪಾದಚಾರಿ ಮಾರ್ಗವನ್ನು 3 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇದು ಹೊಸದಾಗಿ ನಿರ್ಮಿಸಿದ ಮಾರ್ಗವಲ್ಲ. –ಯಶೋದಾ ಲಕ್ಷ್ಮಿಕಾಂತ್, ಸ್ಥಳೀಯ ಪಾಲಿಕೆ ಸದಸ್ಯೆ