ಪಣಜಿ: ‘ಯುವತಿಯರು ಬಿಯರ್ ಕುಡಿಯಲು ಪ್ರಾರಂಭಿಸುವುದು ನನ್ನಲ್ಲಿ ಭಯ ಹುಟ್ಟುಹಾಕಿದೆ. ಸಹನೆಯ ಮಿತಿ ದಾಟಿದೆ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸಚಿವಾಲಯ ಇಲಾಖೆ ಆಯೋಜಿಸಿದ್ದ ರಾಜ್ಯ ಯುವ ಸಂಸತ್ತಿನಲ್ಲಿ ಮಾತನಾಡಿದ ಅವರು, ‘ನಾನು ಎಲ್ಲರ ಕುರಿತಾಗಿ ಹೇಳುತ್ತಿಲ್ಲ. ಇಲ್ಲಿ ಕುಳಿತವರ ಬಗೆಗೂ ಮಾತನಾಡುತ್ತಿಲ್ಲ’ ಎಂದು ಹೇಳಿದರು.
ರಾಜ್ಯದಲ್ಲಿ ಮಾದಕ ವಸ್ತು ಹಾವಳಿ ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಮರ್ಥಿಸಿಕೊಂಡ ಅವರು, ‘ಮಾದಕ ದ್ರವ್ಯ ವಸ್ತುಗಳು ಕಣ್ಮರೆಯಾಗುವವರೆಗೂ ಈ ಕಾರ್ಯಾಚರಣೆ ನಡೆಯಲಿದೆ. ಕಾಲೇಜುಗಳಲ್ಲಿ ಮಾದಕ ದ್ರವ್ಯದ ಸರಬರಾಜು ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.
‘ಯುವಜನರು ಶ್ರಮದ ಕೆಲಸ ಮಾಡಲು ಮುಜುಗರ ಪಡುತ್ತಿದ್ದಾರೆ. ಅದಕ್ಕಾಗಿಯೇ ಕೆಳಹಂತದ ಗುಮಾಸ್ತರ ಹುದ್ದೆಗೆ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಎಂದರೆ ಏನೂ ಕೆಲಸ ಮಾಡಬೇಕಾಗಿಲ್ಲ ಎನ್ನುವ ಮನೋಭಾವ ಜನರಲ್ಲಿ ಬೆಳೆದು ಬಂದಿದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.