ಶಿವಮೊಗ್ಗ: ಅಂತಿಮ ಹಂತದ ಜನಾಶೀರ್ವಾದ ಯಾತ್ರೆ ಸಲುವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಯಾತ್ರೆ ಕೈಗೊಳ್ಳಲಿರುವ ರಾಹುಲ್ ಮಂಗಳವಾರ ಶಿವಮೊಗ್ಗ ಪ್ರವಾಸಿ ಮಂದಿರದ ಹೆಲಿಪ್ಯಾಡ್ಗೆ ಬಂದಿಳಿದಿದ್ದಾರೆ. ಅವರು ಇಲ್ಲಿನ ಗೋಪಿ ವೃತ್ತದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರತ್ಯೇಕ ಹೆಲಿಕಾಪ್ಟರ್ನಲ್ಲಿ ಬಂದಿಳಿದಿದ್ದು, ಪಕ್ಷದ ಅಧ್ಯಕ್ಷರಿಗೆ ಸಾಥ್ ನೀಡಲಿದ್ದಾರೆ.
ಬಿಜೆಪಿ ವಿರುದ್ಧ ಟೀಕೆ: ರಾಹುಲ್ ಗಾಂಧಿ ಬರುವಿಕೆಗೆ ಹೆಲಿಪ್ಯಾಡ್ ಬಳಿ ಕಾಯುತ್ತಿದ್ದಾಗ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಬಿಜೆಪಿಯನ್ನು ಟೀಕಿಸಿದರು.
‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಯ ವಿಷಯ ಹಳೆಯದ್ದು. ಈ ಚುನಾವಣೆಗೆ ಅದನ್ನು ತಳುಕು ಹಾಕಬೇಕಿಲ್ಲ. ಬಿಜೆಪಿ ಒಳ್ಳೆಯ ಘೋಷಣೆಗಳನ್ನಷ್ಟೇ ಕೊಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರೂ ಪ್ರಯೋಗಗಳನ್ನು ಮಾಡುತ್ತಾರೆ. ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದ ನಂತರ ಕಾಂಗ್ರೆಸ್ಗೆ ಸಮಸ್ಯೆ ಎದುರಾಗಿತ್ತು. ಮತ್ತೆ 1990ರ ದಶಕದ ಅಂತ್ಯದಲ್ಲೂ ಪಕ್ಷ ಬಿಕ್ಕಟ್ಟು ಎದುರಿಸಿತ್ತು. ಈಗ ಜನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಕಾಶ ಕೊಟ್ಟು ಪಾಠ ಕಲಿತಿದ್ದಾರೆ’ ಎಂದು ಅವರು ಹೇಳಿದರು.