ಬೆಳಿಗ್ಗೆ 9.30ಕ್ಕೆ ರಾಹುಲ್ ಗಾಂಧಿ ಅವರು ಮೈದಾನಕ್ಕೆ ಬರುವ ನಿರೀಕ್ಷೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆ 7 ಗಂಟೆಗೇ ಜಮಾಯಿಸಿದ್ದರು. ಮಂತ್ರಿಮಾಲ್ ಸಮೀಪದ ರಾಜೀವ್ ಗಾಂಧಿ ವೃತ್ತದಿಂದ ಮೈದಾನದವರೆಗೂ ರಸ್ತೆಯ ಎರಡೂ ಬದಿ ನಿಂತು ಕಾಯುತ್ತಿದ್ದರು. ಆದರೆ, 11 ಗಂಟೆಯಾದರೂ ರಾಹುಲ್ ಬರಲೇ ಇಲ್ಲ. ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆಯೇ ಜನರ ಸಂಖ್ಯೆ ಕಡಿಮೆಯಾಗತೊಡಗಿತು. 11.15ರ ಸುಮಾರಿಗೆ ವೃತ್ತಕ್ಕೆ ಬಂದ ರಾಹುಲ್, ತಂದೆ ರಾಜೀವ್ ಗಾಂಧಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ಗುಂಡೂರಾವ್, ಸಚಿವ ಕೆ.ಜೆ.ಜಾರ್ಜ್, ಮೇಯರ್ ಸಂಪತ್ರಾಜ್ ಇದ್ದರು.