ವಿರಾಜಪೇಟೆ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ನೀತಿಸಂಹಿತೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ಪಾಲಿಸಬೇಕು ಎಂದು ಚುನಾವಣಾಧಿಕಾರಿ ಕೆ.ರಾಜು ಸೂಚಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಇಲ್ಲಿನ ಮಿನಿವಿಧಾನಸೌಧದಲ್ಲಿ ಮಂಗಳವಾರ ನಡೆದ ‘ಸಮಾಧಾನ್, ಸುವಿಧ’ ತಂತ್ರಾಂಶದ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜಕೀಯ ಪಕ್ಷಗಳ ಸಭೆ, ಮೆರವಣಿಗೆ, ಪ್ರಚಾರಕ್ಕೆ ಧ್ವನಿವರ್ಧಕ ಬಳಸಲು 48 ಗಂಟೆಗಳ ಮುಂಚಿತವಾಗಿ ಕ್ಷೇತ್ರದ ಚುನಾವಣಾಧಿಕಾರಿಯಿಂದ ‘ಸುವಿಧ’ ತಂತ್ರಾಂಶದಲ್ಲಿ ಅನುಮತಿ ಪಡೆಯಬಹುದು. ಪಕ್ಷದ ಪ್ರತಿನಿಧಿಗಳು ಚುನಾವಣಾ ಅಧಿಕಾರಿಗಳ ಕಚೇರಿಗೆ ಬಾರದೇ ಅಂತರ್ಜಾಲದಲ್ಲಿಯೇ ದಾಖಲೆಗಳನ್ನು ಸಲ್ಲಿಸಿ ಸಭೆ ನಡೆಸಲು ಅನುಮತಿ ಪಡೆಯಲು ಅವಕಾಶವಿದೆ ಎಂದರು.
ರಾಜಕೀಯ ಪಕ್ಷಗಳು ಮನೆಯಿಂದ ಮನೆಗೆ ಪ್ರಚಾರ ಕೈಗೊಳ್ಳುವ ಸಮಯದಲ್ಲಿಯೂ ಐದು ಮಂದಿಯ ಮಿತಿಯೊಳಗಿರಬೇಕು. ಸಾಕಷ್ಟು ಜನರನ್ನು ಕರೆದುಕೊಂಡು ಜಾತ್ರೆಯಂತೆ ಪ್ರಚಾರ ಮಾಡಲು ಅವಕಾಶವಿಲ್ಲ. ಪೂರ್ವಾನುಮತಿ ಪಡೆದ ನಂತರ ಸಭೆ–ಸಮಾರಂಭಗಳ ಖರ್ಚು–ವೆಚ್ಚಗಳನ್ನು ತಪ್ಪದೇ ಚುನಾವಣಾ ಕಚೇರಿಯಲ್ಲಿ ದಾಖಲಿಸಬೇಕು. ಅನುಮತಿ ಪಡೆಯಲು ‘ಸಮಾಧಾನ್, ಸುವಿಧ’ ತಂತ್ರಾಂಶ ಸರಳ ವಿಧಾನ ಎಂದು ಅವರು ತಿಳಿಸಿದರು.
ತಹಶೀಲ್ದಾರ್ ಆರ್.ಗೋವಿಂದರಾಜು, ಡಿವೈಎಸ್ಪಿ ನಾಗಪ್ಪ, ನೋಡೆಲ್ ಅಧಿಕಾರಿ ಪ್ರಭು, ಚುನಾವಣಾ ಸಿಬ್ಬಂದಿ ಇದ್ದರು. ನೀತಿ ಸಂಹಿತೆಯ ಕುರಿತು ಪಕ್ಷದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪ್ರತಿನಿಧಿಗಳು ಇದ್ದರು.