ವಿಜಯಪುರ: ‘ಎಲ್ಲರೂ ವಿದೇಶಕ್ಕೆ ಹೋದಾಗ ಬಟ್ಟೆ ಸಲಕರಣೆಗಳನ್ನು ತಂದರೆ, ಜಗತ್ತಿಗೆ ಮಾದರಿ ಸಂವಿಧಾನದ ಕೊಡುಗೆ ನೀಡಿದ ಡಾ.ಬಿ.ಆರ್. ಅಂಬೇಡ್ಕರ ಪುಸ್ತಕಗಳನ್ನ ತುಂಬಿದ ಪೆಟ್ಟಿಗೆಗಳನ್ನು ಹೊತ್ತು ತಂದವರು’ ಎಂದು ಸಂತೋಷ ಹಂಜಗಿ ಹೇಳಿದರು.
ಬಸವೇಶ್ವರ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆ ನಗರದ ಬಸವೇಶ್ವರ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಅವರಿಗೆ ಯಾವ ವಸ್ತುವಿನ ಮೇಲೆ ವ್ಯಾಮೋಹ ಇರಲಿಲ್ಲ. ಜ್ಞಾನದ ಹಸಿವಿತ್ತು. ತಮ್ಮಲ್ಲಿ ಹಣವಿದ್ದರೆ ಕೆಲವೊಂದಿಷ್ಟನ್ನು ಹೊಟ್ಟೆ ತುಂಬಿಕೊಳ್ಳಲು ಇಟ್ಟುಕೊಂಡು, ಉಳಿದ ಹಣವನ್ನು ಪುಸ್ತಕ ಖರೀದಿಗೆ ಖರ್ಚು ಮಾಡುತ್ತಿದ್ದರು’ ಎಂದರು.
ಡಾ.ಅಂಬೇಡ್ಕರ ಕಾಲೊನಿ ಅಭಿವೃದ್ಧಿ ಸಂಘ: ಮಹಿಳಾ ಸಬಲೀಕರಣಕ್ಕಾಗಿ ಲೋಕಸಭೆಯಲ್ಲಿ ಹಿಂದು ಕೋಡ್ ಬಿಲ್ ಮಂಡಿಸಿದ ಖ್ಯಾತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಉಪನ್ಯಾಸಕಿ ಡಾ. ಸುಜಾತ ಚಲವಾದಿ ಹೇಳಿದರು.
ಇಲ್ಲಿನ ನವರಸಪುರ ಗ್ರಾಮದಲ್ಲಿ ಡಾ.ಅಂಬೇಡ್ಕರ ಕಾಲೊನಿ ಅಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಲ್ ಮಂಡಿಸಿದಾಗ ಬಹುಮತ ಸಿಗದ ಕಾರಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಧ್ವನಿ ಎತ್ತಿದರು ಎಂದರು.