ವೇತನ ಮಂಡಲಿ ಶಿಫಾರಸು ಬರುವ ತನಕ ಕೈಗಾರಿಕೆಗಳಲ್ಲಿ ವೇತನ ಸ್ತಂಭನಕ್ಕೆ ಸಲಹೆ
ನವದೆಹಲಿ, ಏ. 19– ಕೈಗಾರಿಕೆಗಳ ವೇತನ ಮಂಡಲಿಯ ಶಿಫಾರಸುಗಳ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಕೈಗಾರಿಕೆಯಲ್ಲಿ ವೇತನ ಸ್ಥಗಿತಗೊಳಿಸಬೇಕೆಂಬ ಮಹತ್ವದ ವಿಷಯವನ್ನು ಈ ವಾರಾಂತ್ಯದಲ್ಲಿ ಇಲ್ಲಿ ಸೇರಲಿರುವ ತ್ರಿಪಕ್ಷೀಯ ಕಾರ್ಮಿಕ ಸಮ್ಮೇಳನ ಪರಿಶೀಲಿಸುವುದು.
ಶಾಸಕರಿಗೇ ‘ಕಾಂಗ್ರೆಸ್ಸು’
ಮುಂಬೈ, ಏ. 19– ಮಹಾರಾಷ್ಟ್ರ ಸರಕಾರದ ವಿಧಾನಮಂಡಲದ ಕಚೇರಿಯು ಕೆಲವು ಮಂದಿ ಸದಸ್ಯರಿಗೆ ಅವರಿಗೆ ಕೊಡಬೇಕಾದ ಹಣದ ಬಗ್ಗೆ ನೀಡಿದ ಕೆಲವು ಚೆಕ್ಕುಗಳನ್ನು, ಸರಕಾರದ ಲೆಕ್ಕದಲ್ಲಿ ಹಣವಿಲ್ಲದ ಕಾರಣ, ರಿಜರ್ವ್ ಬ್ಯಾಂಕ್ ತಿರಸ್ಕರಿಸಿತು.
ಕಾಂಗ್ರೆಸ್ ಪಕ್ಷದ ವಿಧಾನಸಭಾ ಸದಸ್ಯ ಶ್ರೀ ಪಿ.ಎಚ್. ವೋರಾ ಅವರಿಗೆ ಈ ತಿಂಗಳು 13 ರಂದು ನೀಡಿದ್ದ 200 ರೂಪಾಯಿಗಳ ಮೌಲ್ಯದ ಚೆಕ್ಕೂ ತಿರಸ್ಕೃತವಾದವುಗಳಲ್ಲೊಂದು.
ಗೊಬ್ಬರ ಹಾಗೂ ತೈಲ ಕುರಿತ ಸರ್ಕಾರದ ನೀತಿ ಬಗ್ಗೆ ಉಗ್ರ ಟೀಕೆ
ನವದೆಹಲಿ, ಏ. 19– ರಾಸಾಯನಿಕ ಗೊಬ್ಬರ ಉತ್ಪಾದನಾ ಗುರಿಯನ್ನು ಪೂರ್ಣ ಮಾಡುವುದರಲ್ಲಿ ಸರಕಾರ ವಿಫಲವಾಗಿದೆ ಎಂದು ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಟೀಕಿಸಿದರು.
ಸರ್ಕಾರಿ ಉದ್ಯಮಗಳಲ್ಲಿ ಕಾರ್ಮಿಕ ಮಂಡಲಿ ರಚಿಸಲು ಸೂಚನೆ
ನವದೆಹಲಿ, ಏ. 19– ಕಾರ್ಮಿಕ ಸಂಘಗಳನ್ನು ಬದಿಗೊತ್ತಿ, ಕಾರ್ಮಿಕರಿಂದಲೇ ಚುನಾಯಿತ ಕಾರ್ಮಿಕ ಮಂಡಲಿಯೊಂದನ್ನು ರಚಿಸಬೇಕೆಂಬ ಸೂಚನೆಯನ್ನು ಕೇಂದ್ರ ಕಾರ್ಮಿಕ ಸಚಿವ ಶ್ರೀ ಜೆ.ಎಲ್. ಹಾಥಿ ಅವರು ಸರ್ಕಾರಿ ಕ್ಷೇತ್ರದ ಉದ್ಯಮಗಳ ಪದಾಧಿಕಾರಿಗಳ ಸಮ್ಮೇಳನದಲ್ಲಿ ಇಂದು ಮಂಡಿಸಿದರು.