ಶ್ರೀನಗರ: ಕಳೆದ ವಾರ ಮೂವರು ಯುವಕರನ್ನು ಗುಂಡಿಕ್ಕಿ ಕೊಂದ ಆರೋಪದಡಿ ನಾಲ್ಕು ಉಗ್ರರು ಮತ್ತು ಏಳು ಸಹಾಯಕರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕಳೆದ ವಾರ ಬಂಧಿತ ಉಗ್ರರು ಮೂವರು ಯುವಕರನ್ನು ಜಮ್ಮುಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ಹತ್ಯೆಗೈದಿದ್ದರು. ಲಷ್ಕರ್–ಎ–ತಯೆಬಾ ಸಂಘಟನಾ ಉಗ್ರರು ಈ ಹತ್ಯೆಯ ರೂವಾರಿಗಳು ಎಂಬ ಶಂಕೆ ವ್ಯಕ್ತವಾಗಿತ್ತು.
ಬಂಧಿತ ಉಗ್ರರನ್ನು ನಸೀರ್ ಅಹಮದ್ ಮೋಚಿ, ಬಿಲಾಲ್ ಅಹಮದ್ ನಜಾರ್, ಆಜಾಜ್ ಅಹಮದ್ ಗೋಜ್ರಿ, ನದೀಮ್ ಕಲಿಯಾ ಎಂದು ಗುರುತಿಸಲಾಗಿದೆ.
ಇನ್ನು ಉಗ್ರ ಸಹಾಯಕರಾದ ಓವೈಸ್ ರಶೀದ್ ಭಟ್, ಓಜಯಿರ್ ಅಹಮದ್ ಭಟ್, ಅಮೀನ್ ಭಟ್, ಮುಜಾಮಿಲ್ ಬಶೀರ್, ಶರೀಫ್ ಬಶೀರ್ ಭಟ್, ನಯೀಮ್ ಅಬ್ದುಲ್ಲಾ ಎಂದು ತಿಳಿದು ಬಂದಿದೆ.
ತನಿಖೆ ವೇಳೆ ಏ.30ರಂದು ನಡೆದಿದ್ದ ಮೂವರ ಯುವಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಗ್ಗೆ ಬಹಿರಂಗಪಡಿಸಿದ್ದಾರೆ.
ರಾಜ್ಯ ವಿಶೇಷ ಸಶಸ್ತ್ರ ಪಡೆ 46 ಮತ್ತು 52 ರಾಷ್ಟ್ರೀಯ ರೈಫಲ್ ಬೆಟಾಲಿಯನ್ ಪಡೆಯ ಜಂಟಿ ಕಾರ್ಯಾಚರಣೆ ಮೂಲಕ ವಿಭಿನ್ನ ಸ್ಥಳಗಳಲ್ಲಿ ಉಗ್ರರನ್ನು ಬಂಧಿಸಲಾಗಿದೆ. ಈ ವೇಳೆ ಪಿಸ್ತೂಲ್ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.