ತುಮಕೂರು: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಮುಕ್ತ ಮತ್ತು ಶಾಂತಿಯುತವಾಗಿ ನಡೆಸಲು ಪ್ರತಿ ಮತಗಟ್ಟೆಗೆ ತಲಾ 5 ಮಂದಿಯಂತೆ ಸುಮಾರು 14 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ತಿಳಿಸಿದ್ದಾರೆ.
ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಗಳಿಗೆ ಸಿಬ್ಬಂದಿಗಳನ್ನು ಕರೆದೊಯ್ಯಲು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಿಗೆ 433 ಬಸ್, 120 ಮಿನಿ ಬಸ್, 68 ಜೀಪ್, ಬೊಲೆರೊ, ಟವೇರಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಸ್ಟರಿಂಗ್- ಡಿಮಸ್ಟರಿಂಗ್ (ಮತಗಟ್ಟೆಗೆ ಚುನಾವಣೆ ಸಿಬ್ಬಂದಿ ಚುನಾವಣಾ ಸಾಮಗ್ರಿ ತೆಗೆದುಕೊಂಡು ಹೋಗುವ ಮತ್ತು ಬರುವ ಕೇಂದ್ರ) ಕೇಂದ್ರಗಳಾಗಿ ಗುರುತಿಸಲಾಗಿರುವ ಶಾಲಾ ಕಾಲೇಜುಗಳ ವಿವರ ಇಲ್ಲಿದೆ.
ಚಿಕ್ಕನಾಯಕನಹಳ್ಳಿ: ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು, ತಿಪಟೂರು: ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ತುರುವೇಕೆರೆ: ಸರ್ಕಾರಿ ಪದವಿಪೂರ್ವ ಕಾಲೇಜು, ಕುಣಿಗಲ್: ಮಹಾತ್ಮಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜು, ತುಮಕೂರು ನಗರ : ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ತುಮಕೂರು ಗ್ರಾಮಾಂತರ: ವಿಜಯನಗರ ಸರ್ವೋದಯ ಎಜುಕೇಶನ್ ಇನ್ಸ್ಟಿಟ್ಯೂಟ್, ಸೋಮೇಶ್ವರ ಬಾಲಕಿಯರ
ಪ್ರೌಢಶಾಲೆ.
ಕೊರಟಗೆರೆ: ಸರ್ಕಾರಿ ಪದವಿಪೂರ್ವ ಕಾಲೇಜು, ಗುಬ್ಬಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜ್ಯೋತಿನಗರ, ಪಾವಗಡ: ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಮಧುಗಿರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಮಾದರಿ ಮತಗಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 12 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅವುಗಳ ವಿವರ ಇಲ್ಲಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕುಪ್ಪೂರು-1, ಕುಪ್ಪೂರು-2; ತಿಪಟೂರು ಕ್ಷೇತ್ರದ ಹಳೇಪಾಳ್ಯ ಸರ್ಕಾರಿ ಪ್ರೌಢಶಾಲೆ, ತುರುವೇಕೆರೆಯ ಪಟ್ಟಣ ಪಂಚಾಯತಿ, ಕುಣಿಗಲ್ ಕ್ಷೇತ್ರದ ದೊಡ್ಡಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಸಿದ್ಧಗಂಗಾ ಪದವಿಪೂರ್ವ ಕಾಲೇಜು, ತುಮಕೂರು ಗ್ರಾಮಾಂತರದ ಹೆಬ್ಬಾಕ ಅಂಗನವಾಡಿ ಕೇಂದ್ರಗಳು. ಕೊರಟಗೆರೆ ಕ್ಷೇತ್ರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಗುಬ್ಬಿ ಕ್ಷೇತ್ರದ ಎಪಿಎಂಸಿ ಸಭಾಂಗಣ, ಶಿರಾದ ಸರ್ಕಾರಿ ಜೂನಿಯರ್ ಕಾಲೇಜು, ಪಾವಗಡದ ಪುರಸಭೆ ಮತಗಟ್ಟೆ, ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
ಕಾಲ್ ಸೆಂಟರ್ ವ್ಯವಸ್ಥೆ
ಚುನಾವಣೆಗೆ ಸಂಬಂಧಿಸಿದ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ (ಕಾಲ್ ಸೆಂಟರ್) ವ್ಯವಸ್ಥೆ ಮಾಡಲಾಗಿದೆ. ಮಾಹಿತಿ ಪಡೆಯಲಿಚ್ಛಿಸುವವರು ದೂರವಾಣಿ ಸಂಖ್ಯೆ 0816– 2272929, 2274466( ಟೋಲ್ ಫ್ರೀ) ಸಂಖ್ಯೆಗೆ ಕರೆ ಮಾಡಿ ಪಡೆಯಬಹುದು. ಅಲ್ಲದೇ ವಾಟ್ಸ್ಅಪ್ ಸಂಖ್ಯೆ 8277310951, ಫೇಸ್ ಬುಕ್– Id:deo.eln.tumkur
ಟ್ವಿಟ್ಟರ್: deo.tumkur@gmail.com ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದ್ದಾರೆ.
ಈಗಾಗಲೇ ಮತದಾರರಿಗೆ ಚೀಟಿಗಳನ್ನು ವಿತರಿಸಲಾಗುತ್ತಿದೆ. ಮತದಾರರ ಕುಟುಂಬಕ್ಕೆ ಒಂದು ಮತದಾರ ಮಾರ್ಗದರ್ಶನ ಪುಸ್ತಕ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮದ್ಯ ವಹಿವಾಟು ನಿಷೇಧ
‘ಚುನಾವಣೆಯನ್ನು ಮುಕ್ತ ಮತ್ತು ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸಲು ಗುರುವಾರ ಸಂಜೆಯಿಂದ ಮೇ 13ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ’ ಎಂದು ಜಿಲ್ಲಾಚುನಾವಣಾಧಿಕಾರಿ ಹೇಳಿದ್ದಾರೆ.
ಅದೇ ರೀತಿ ಮೇ 15ರ ಬೆಳಿಗ್ಗೆ 6 ಗಂಟೆಯಿಂದ 16ರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲ ಮದ್ಯದ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.