ಬೆಂಗಳೂರು: ಇಡೀ ದೇಶದ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ (ಮೇ 12) ನಡೆಯಲಿದ್ದು, 222 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯವನ್ನು 5.02 ಕೋಟಿ ಮತದಾರರು ಬರೆಯಲಿದ್ದಾರೆ.
ಅಧಿಕಾರದಲ್ಲಿ ಮುಂದುವರಿಯುವ ಪಣ ತೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ರಾಜ್ಯವನ್ನು ಸುತ್ತಿದ್ದಾರೆ. ಅವರ ಬಳಿ ಇರುವ ಅಧಿಕಾರವನ್ನು ಕಸಿದುಕೊಂಡು ಮತ್ತೆ ಮುಖ್ಯಮಂತ್ರಿ ಗದ್ದುಗೆಗೆ ಏರುವ ಅಪೇಕ್ಷೆ ಇಟ್ಟುಕೊಂಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತೀವ್ರ ಸವಾಲು ಒಡ್ಡಿದ್ದಾರೆ.
‘ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಸಂಕಲ್ಪ ಮಾಡಿದ್ದೇವೆ’ ಎಂದು ಪ್ರತಿಪಾದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯದ ದಶ ದಿಕ್ಕುಗಳಲ್ಲಿ ಬಿರುಗಾಳಿಯಂತೆ ಓಡಾಡಿ ಸಾಕಷ್ಟು ಬೆವರು ಹರಿಸಿದ್ದಾರೆ. ‘ಮೋದಿ ಕನಸಿಗೆ ತಡೆಗೋಡೆ ನಿರ್ಮಿಸುವ ಕೆಲಸ ಹಾಗೂ ಕಾಂಗ್ರೆಸ್ ಪುನಃಶ್ಚೇತನ ಪರ್ವ ಕರುನಾಡಿನಿಂದಲೇ ಶುರುವಾಗಲಿದೆ’ ಎಂದು ಹೇಳಿಕೊಳ್ಳುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ‘ಕೈ’ ಪರ ಅಲೆ ಎಬ್ಬಿಸಲು ಒಂದೂವರೆ ತಿಂಗಳು ರಾಜ್ಯ ಸುತ್ತಾಡಿದ್ದಾರೆ. ‘ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಈ ಚುನಾವಣೆಯ ಗೆಲುವು ಮುಖ್ಯ’ ಎಂದು ಹೇಳಿಕೊಂಡಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಧಿಕಾರ ಹಿಡಿಯುವ ಬಯಕೆಯಿಂದ ಭರ್ಜರಿ ಪ್ರಚಾರ ನಡೆಸಿದ್ದಾರೆ. 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕರ್ನಾಟಕದ ಗೆಲುವು ಮೂರು ಪಕ್ಷಗಳಿಗೂ ನಿರ್ಣಾಯಕವಾಗಿದೆ.
ಮುಂದುವರಿದ ಘರ್ಷಣೆ: ಮತದಾನಕ್ಕೆ ಮುನ್ನವೇ ರಾಜ್ಯದ ವಿವಿಧ ಕಡೆಗಳಲ್ಲಿ ಹೊಡೆದಾಟ ಬಡಿದಾಟಗಳು ನಡೆದಿವೆ.
ಗುರುವಾರ ತಡ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಸಚಿವ ರಮಾನಾಥ ರೈ ಆಪ್ತ ಸಂಜೀವ ಪೂಜಾರಿ ಮನೆ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ, ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಬಂಟ್ವಾಳ ಬಿಜೆಪಿ ಉಪಾಧ್ಯಕ್ಷ ಶ್ರೀಕಾಂತ ಶೆಟ್ಟಿ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎಂದು ಪೂಜಾರಿ ದೂರಿದ್ದಾರೆ. ಶ್ರೀಕಾಂತ ಶೆಟ್ಟಿ ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಾಂಗ್ರೆಸ್ ನವರು ಹಣ ಹಂಚುತ್ತಿದ್ದಾರೆ ಎಂದು ದೂರಿ ಜೆಡಿಎಸ್ ಕಾರ್ಯಕರ್ತರು ತಡೆಯಲು ಮುಂದಾದರು. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಮುಂದುವರಿದ ಐ.ಟಿ ಶೋಧ
ಗಣಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತರ ಮನೆಗಳನ್ನು ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ಶೋಧಿಸಿದರು.
ಸಚಿವ ಕುಲಕರ್ಣಿಗೆ ಆಪ್ತರಾದ ಪ್ರಶಾಂತ್ ಕೇಕರೆ, ವೆಂಕಟೇಶ್ ಹಿರೇಮಠ ಹಾಗೂ ಮುತ್ತಣ್ಣ ಬಳ್ಳಾರಿ ಅವರ ಧಾರವಾಡದಲ್ಲಿರುವ ಮನೆಗಳನ್ನು ಜಾಲಾಡಿದ ಐ.ಟಿ ಅಧಿಕಾರಿಗಳು, ಇದೇ 14ರಂದು ಬೆಳಿಗ್ಗೆ ವಿಚಾರಣೆಗೆ ಬರುವಂತೆ ಪ್ರಶಾಂತ್ಗೆ ಸೂಚಿಸಿದ್ದಾರೆ. ಮೊಳಕಾಲ್ಮೂರು ಬಳಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 2.17 ಕೋಟಿ ಹಾಗೂ ಕೋಲಾರದ ಕೊಂಡರಾಜನಹಳ್ಳಿ ಬಳಿ ಸಿಮೆಂಟ್ ಲಾರಿಯಲ್ಲಿ ಸಾಗಿಸುತ್ತಿದ್ದ ₹ 70ಲಕ್ಷ ಜಪ್ತಿ ಮಾಡಲಾಗಿದೆ.
ಅಶೋಕ್ ಖೇಣಿ ಮನೆ, ಅವರ ಸಂಬಂಧಿಕರು ತಂಗಿದ್ದ ಹೊಟೇಲ್ ಕೊಠಡಿ, ಕಾರವಾರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರ ಆಪ್ತರ ಮನೆ ಶೋಧ ನಡೆಸಲಾಗಿದೆ.
ಆರ್.ಆರ್.ನಗರ ಚುನಾವಣೆ ಮುಂದೂಡಿಕೆ
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿದ್ದು, 31ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
‘ಮತದಾರರಿಗೆ ಆಮಿಷವೊಡ್ಡಿ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದಾರೆ. ಹಗರಣವು ಕ್ಷೇತ್ರದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಆಯೋಗ ಕ್ರಮ ಕೈಗೊಂಡಿದೆ’ ಎಂದರು.
ಜಾಲಹಳ್ಳಿಯ ‘ಎಸ್ಎಲ್ವಿ ಪಾರ್ಕ್ ವ್ಯೂ’ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಮೇ 8ರಂದು 9,564 ಗುರುತಿನ ಚೀಟಿಗಳ ಬಂಡಲ್ಗಳು ಸಿಕ್ಕಿದ್ದವು. ಈ ಸಂಬಂಧ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಸೇರಿ 14 ಮಂದಿ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಸಂಗ್ರಹಿಸಿಟ್ಟಿದ್ದ ಅಷ್ಟೂ ಗುರುತಿನ ಚೀಟಿಗಳು ಅಸಲಿ. ಅವುಗಳ ವಿಳಾಸ ಆಧರಿಸಿ ಈಗಾಗಲೇ 801 ಮಂದಿಯ ಹೇಳಿಕೆ ಪಡೆದಿದ್ದೇವೆ. ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ, ಮೇ 28ರೊಳಗೆ ಅಷ್ಟೂ ಮತದಾರರ ಹೇಳಿಕೆ ಪಡೆಯಲಿದ್ದಾರೆ’ ಎಂದು ಸಂಜೀವ್ಕುಮಾರ್ ಹೇಳಿದರು.
‘ಪತ್ತೆಯಾಗಿರುವ ಗುರುತಿನ ಚೀಟಿಗಳ ಆಧಾರದ ಮೇಲೆ ಈಗಾಗಲೇ 801 ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ಅಭ್ಯರ್ಥಿಯು ಸೀರೆ, 50 ಲೀಟರ್ನ ನೀರಿನ ಕ್ಯಾನ್ ಹಾಗೂ ಕುಕ್ಕರ್ ನೀಡಿದ ಕಾರಣಕ್ಕೆ ತಮ್ಮ ಗುರುತಿನ ಚೀಟಿಗಳನ್ನು ಕೊಟ್ಟಿದ್ದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಸಂಜೀವ್ಕುಮಾರ್ ಮಾಹಿತಿ ನೀಡಿದರು.
‘ಕೆಲ ದಿನಗಳ ಹಿಂದೆ ಸದಾಶಿವನಗರ ಠಾಣೆ ವ್ಯಾಪ್ತಿಯಲ್ಲಿ ₹ 95 ಲಕ್ಷ ಮೌಲ್ಯದ ಟಿ–ಶರ್ಟ್ ಹಾಗೂ ಪ್ಯಾಂಟ್ಗಳನ್ನು ಜಪ್ತಿ ಮಾಡಲಾಗಿತ್ತು. ಅವುಗಳ ಮೇಲೂ ಇದೇ ಅಭ್ಯರ್ಥಿಯ ಫೋಟೊ ಹಾಗೂ ಹೆಸರು ಇತ್ತು. ಈ ಎಲ್ಲ ವಿದ್ಯಮಾನಗಳನ್ನು ಕೇಂದ್ರ ಚುನಾವಣಾ ಆಯೋಗ ಸೂಕ್ಷ್ಮವಾಗಿ ಗಮನಿಸಿ ಈ ನಿರ್ಧಾರ ಪ್ರಕಟಿಸಿದೆ’ ಎಂದು ವಿವರಿಸಿದರು.
ಶಾಸಕರ ಬಂಧನಕ್ಕೆ ಆಗ್ರಹ: ಮತದಾರರ ಗುರುತಿನ ಚೀಟಿ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಮುನಿರತ್ನ ಅವರನ್ನು ಬಂಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ . ಮುನಿರತ್ನ ಬಂಧಿಸದೆ ಮುಕ್ತ ಮತ್ತು ನ್ಯಾಯಯುತ ಚುನಾವಣೆ ಸಾಧ್ಯವಿಲ್ಲ ಎಂದು ಅವರು ಶುಕ್ರವಾರ ರಾತ್ರಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
₹ 20 ಲಕ್ಷ ಪರಿಹಾರ
‘ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬಾಗಲಕೋಟೆಯಲ್ಲಿ ರಸ್ತೆ ಅಪಘಾತ ಸಂಭವಿಸಿ ಮೃತಪಟ್ಟ ಡಿವೈಎಸ್ಪಿ ಬಾಳೇಗೌಡ, ಇನ್ಸ್ಪೆಕ್ಟರ್ ಶಿವಸ್ವಾಮಿ ಹಾಗೂ ವಾಹನದ ಚಾಲಕ ವೇಣುಗೋಪಾಲ್ ಕುಟುಂಬಕ್ಕೆ ₹ 20 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಸಂಜಯ್ಕುಮಾರ್ ಹೇಳಿದರು.
**
ನಾನು ಯಾವುದೇ ಅಕ್ರಮ ಎಸಗಿಲ್ಲ. ಯಾರದ್ದೋ ದುರುದ್ದೇಶಕ್ಕೆ ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ಇದೆಲ್ಲ ಬಿಜೆಪಿಯವರ ಕುತಂತ್ರ.
– ಶಾಸಕ ಮುನಿರತ್ನ, ರಾಜರಾಜೇಶ್ವರಿನಗರ ಕ್ಷೇತ್ರ
ಜೆಡಿಎಸ್ನ ಮನವಿಗೆ ಸ್ಪಂದಿಸಿ ಆಯೋಗ ಚುನಾವಣೆಯನ್ನು ಮುಂದೂಡಿದೆ. ಕಾಂಗ್ರೆಸ್ ಇನ್ನಾದರೂ ಬುದ್ಧಿ ಕಲಿಯಲಿ.
– ರಮೇಶ್ಬಾಬು, ವಿಧಾನ ಪರಿಷತ್ ಸದಸ್ಯ
ಶ್ರೀಮಾನ್ ರಾಹುಲ್ ಗಾಂಧಿ ಅವರೇ. ವೋಟರ್ ಐಡಿ ಫ್ಯಾಕ್ಟರಿ ಮಾಲೀಕರಾದ ಮುನಿರತ್ನ ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಿ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.