ಕೃಷ್ಣಾ ಪರಿಷ್ಕೃತ ಯೋಜನೆಗೆ ಒಪ್ಪಿಗೆ
ಬೆಂಗಳೂರು, ಮೇ 14– ವೆಚ್ಚದಲ್ಲಿ 25 ಕೋಟಿ ರೂಪಾಯಿಗಳನ್ನು ಉಳಿಸುವುದರೊಂದಿಗೆ ನೀರಾವರಿ ದೊರೆಯುವ ಜಮೀನನ್ನು 16 ಲಕ್ಷ ಎಕರೆಗಳಿಂದ 19.5 ಲಕ್ಷ ಎಕರೆಗಳಿಗೇರಿಸುವ ಕೃಷ್ಣಾ ಮೇಲ್ದಂಡೆಯ ಪರಿಷ್ಕೃತ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಬೇಷರತ್ ಬಾಂಬ್ ದಾಳಿ ನಿಲುಗಡೆಗೆ ಉ ಥಾಂಟ್ ಕರೆ
ವಿಶ್ವಸಂಸ್ಥೆ, ಮೇ 14– ವಿಯಟ್ನಾಂ ಶಾಂತಿ ಸಂಧಾನಗಳಿಗಾಗಿ ಯೋಗ್ಯ ವಾತಾವರಣ ಸೃಷ್ಟಿಸಲು ಉತ್ತರ ವಿಯಟ್ನಾಂ ವಿರುದ್ಧ ಬಾಂಬ್ ದಾಳಿಯ ಬೇಷರತ್ ನಿಲುಗಡೆ ಪ್ರಪ್ರಥಮ ಅವಶ್ಯಕತೆಯೆಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟರು ಇಂದು ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆಗೆ ಮತ್ತೆ ಕಾಶ್ಮೀರ ಪ್ರಶ್ನೆ: ಪಾಕಿಸ್ತಾನದ ಪರಿಶೀಲನೆಯಲ್ಲಿ
ನವದೆಹಲಿ, ಮೇ 14– ವಿಶ್ವ ರಾಷ್ಟ್ರ ಸಂಸ್ಥೆಗೆ ಮತ್ತೆ ಕಾಶ್ಮೀರ ವಿವಾದವನ್ನೊಯ್ಯುವ ಬಗ್ಗೆ ಪಾಕಿಸ್ತಾನ ಪರಿಶೀಲಿಸುತ್ತಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಅರ್ಷದ್ ಹುಸೇನ್ ಅವರು ಇಂದು ಪಾರ್ಲಿಮೆಂಟಿಗೆ ತಿಳಿಸಿದರು.
ಕಾಶ್ಮೀರ ವಿವಾದದ ಬಗ್ಗೆ ಭಾರತದೊಂದಿಗೆ ಸಚಿವ ಮಟ್ಟದ ಮಾತುಕತೆಯ ಸಾಧ್ಯತೆ ಈಗ ಸದ್ಯಕ್ಕಿಲ್ಲವೆಂದೂ ನೇರ ಸಂಧಾನಗಳ ಮೂಲಕ ಈ ವಿವಾದ ಪರಿಹಾರಕ್ಕೆ ಪಾಕಿಸ್ತಾನ ಸತತ ಯತ್ನಿಸುತ್ತಿದೆಯೆಂದೂ ಅವರು ಹೇಳಿದರು.
ಫರಕ್ಕಾ ಅಣೆ ಬಗ್ಗೆ ಮಧ್ಯಸ್ಥಿಕೆಗೆ ಪಾಕಿಸ್ತಾನದ ಒತ್ತಾಯ
ನವದೆಹಲಿ, ಮೇ 14– ಗಂಗಾನದಿಯ ಜಲ ವಿವಾದದ ಬಗ್ಗೆ ಭಾರತ–ಪಾಕಿಸ್ತಾನದ ನಡುವಣ ಮಾತುಕತೆ ಮುರಿದು ಬೀಳುವಂತೆ ಕಾಣಬರುತ್ತಿದೆ.
ಈ ವಿವಾದದ ವಿಷಯದಲ್ಲಿ ಮೂರನೆಯವರು ಮಧ್ಯಸ್ಥಿಕೆ ವಹಿಸುವುದರ ಅಗತ್ಯವನ್ನು ಪಾಕಿಸ್ತಾನದ ನಿಯೋಗ ಒತ್ತಿ ಹೇಳುತ್ತಿದ್ದರೆ, ಈ ಸಮಸ್ಯೆ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಬೇಕೆಂದು ಭಾರತೀಯ ನಿಯೋಗ ಆಗ್ರಹಪಡಿಸುತ್ತಿದೆ.
ಈ ವಿವಾದದ ವಿಷಯದಲ್ಲಿ ಎರಡು ದಿನಗಳ ಮಾತುಕತೆಯ ನಂತರ ಯಾವ ಸ್ಪಷ್ಟ ಪ್ರಗತಿ ಸಾಧಿತವಾಗಿಲ್ಲವೆಂದು ಪಾಕಿಸ್ತಾನದ ನಿಯೋಗದ ನಾಯಕ ಶ್ರೀ ಎಸ್.ಎಸ್. ಜಫ್ರಿ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.