ಪೊಲೀಸ್ ಸಿಬ್ಬಂದಿಯೊಬ್ಬರು ನಡುರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೊ ಜತೆಗೆ, ‘ನೋಡಿ ಟಿಎಂಸಿ ನಾಯಕ ಶಹಜಹಾನ್ ಶೇಖ್ ವಿರುದ್ಧ ದೂರು ನೀಡಿದ ಕಾರಣಕ್ಕೆ ಸಂದೇಶ್ಖಾಲಿ ಪೊಲೀಸರು ಆ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿದ್ದಾರೆ’ ಎಂಬ ಸಂದೇಶ ಹಂಚಿಕೊಳ್ಳಲಾಗುತ್ತಿದೆ. ಜತೆಗೆ ಹಲವರು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತ ನಡೆಸುತ್ತಿರುವ ವೈಖರಿ ಇದು. ಅಲ್ಲಿ ಅನ್ಯಾಯದ ವಿರುದ್ಧ ದನಿ ಎತ್ತಿದವರಿಗೆ ನೆಲೆಯೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇದು ತಿರುಚಲಾದ ಮಾಹಿತಿ.
ಪೊಲೀಸರು ಹೀಗೆ ಹಲ್ಲೆ ನಡೆಸಿದ ವಿಡಿಯೊ ಪಶ್ಚಿಮ ಬಂಗಾಳದ್ದೇ ಆಗಿದೆ. ಆದರೆ ಆ ವಿಡಿಯೊಗೂ ಸಂದೇಶ್ಖಾಲಿಗೂ ಯಾವುದೇ ಸಂಬಂಧವಿಲ್ಲ. ಈ ವಿಡಿಯೊವನ್ನು 2020ರ ಏಪ್ರಿಲ್ನಲ್ಲಿ ಚಿತ್ರೀಕರಿಸಲಾಗಿತ್ತು. ಕೋವಿಡ್ ಅವಧಿಯಲ್ಲಿ ಪಶ್ಚಿಮ ಬಂಗಾಳದ ಬದೂರಿಯಾ ಪ್ರದೇಶದಲ್ಲಿ ಪಡಿತರ ವಿತರಣೆ ಸಂಬಂಧ ಘರ್ಷಣೆ ನಡೆದಿತ್ತು. ಆ ಸ್ಥಳದಲ್ಲಿದ್ದ ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಜಟಾಪಟಿ ನಡೆದು, ಜನರು ಪ್ರತಿಭಟನೆ ನಡೆಸಿದ್ದರು. ಆ ಜನರ ಮೇಲೆ ಪೊಲಿಸರು ಲಾಠಿ ಪ್ರಹಾರ ನಡೆಸಿದ್ದರು. ಆ ವಿಡಿಯೊವನ್ನೇ ಈಗ ಸಂದೇಶ್ಖಾಲಿಯ ಘಟನೆ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.