ಕೋವಿಡ್-19 ಲಸಿಕೆ ತಯಾರಿಕೆಯಲ್ಲಿ ಭಾರತವು ಏಕಸ್ವಾಮ್ಯ ಸಾಧಿಸಿದೆ. ಆದರೆ ಈಗ ದೇಶದಲ್ಲಿ ಕೋವಿಡ್-19ನ ಹೊಸ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣ, ಲಸಿಕೆ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಲಸಿಕೆ ಪೂರೈಕೆಯಲ್ಲಿ ದೇಶದ ಅಗತ್ಯಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ದೇಶದ ಎಲ್ಲಾ ರಾಜ್ಯಗಳಿಗೂ ಲಸಿಕೆ ಸರಿಯಾಗಿ ಪೂರೈಕೆಯಾಗುತ್ತದೆ ಎಂಬ ವಿವರ ಇರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ಬಿಜೆಪಿಯ ಕೆಲವು ಬೆಂಬಲಿಗರು, 'ಕೋವಿಡ್ ಲಸಿಕೆ ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂದು ತಯಾರಿಕಾ ಕಂಪನಿಗಳಿಗೆ ಸರ್ಕಾರವು ಸೂಚನೆ ನೀಡಿದೆ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವು ರಾಜಕೀಯ ನಾಯಕರೂ ಬಹಿರಂಗವಾಗಿ ಇದನ್ನು ಘೋಷಿಸಿದ್ದಾರೆ.