ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರತಂದ ರಕ್ಷಣಾ ಕಾರ್ಯಕರ್ತರು ಭಾರತದ ಧ್ವಜ ಹಿಡಿದು ಸಂಭ್ರಮಿಸಿದ ಚಿತ್ರವೊಂದು ದೇಶದ ಬಹುತೇಕ ಪತ್ರಿಕೆಗಳಲ್ಲಿ ಮತ್ತು ಸುದ್ದಿ ಜಾಲತಾಣಗಳಲ್ಲಿ ಪ್ರಕಟವಾಗಿದೆ. ಆದರೆ ಇದು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಸೃಷ್ಟಿಸಿದ ಚಿತ್ರವಾಗಿದೆ.
ಸಿಲ್ಕ್ಯಾರಾ ಸುರಂಗ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದ ನಂತರ ಪಿಟಿಐ ಈ ಚಿತ್ರವನ್ನು ಪ್ರಕಟಿಸಿತ್ತು. ಪಿಟಿಐ ತನ್ನ ವಿವರಣೆಯಲ್ಲಿ ‘@Ra_THORe’ ಮೂಲಕ ಬಂದ ಚಿತ್ರ ಎಂದು ಹೇಳಿತ್ತು. ಅದನ್ನು ಎಲ್ಲಾ ಪತ್ರಿಕೆಗಳು ಮತ್ತು ಸುದ್ದಿ ಜಾಲತಾಣಗಳು ಬಳಸಿಕೊಂಡಿದ್ದವು. ಆದರೆ ನವೆಂಬರ್ 29ರಂದು ಈ ಬಗ್ಗೆ ಫ್ಯಾಕ್ಟ್ಚೆಕ್ ಪ್ರಕಟಿಸಿದ್ದ ಬೂಮ್ಲೈವ್, ‘ಇದು ಎಐ ಮೂಲಕ ಸೃಷ್ಟಿಸಿದ ಚಿತ್ರ. ಇದನ್ನು ನಿಜ ಎಂಬಂತೆಯೇ ಪತ್ರಿಕೆಗಳಲ್ಲಿ ಬಳಸಿಕೊಳ್ಳಲಾಗಿದೆ. ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಈ ಚಿತ್ರವನ್ನು ಟ್ವೀಟ್ ಮಾಡಿದ್ದರು. ಅದನ್ನೇ ಪಿಟಿಐ ಬಳಸಿಕೊಂಡಿದೆ’ ಎಂದು ವಿವರಣೆ ನೀಡಿತ್ತು.
ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಎಕ್ಸ್ಪೋಸ್ಟ್ ಹ್ಯಾಂಡಲ್ ಅನ್ನು ಪರಿಶೀಲಿಸಿದಾಗ, ಅವರು ನವೆಂಬರ್ 28ರ ರಾತ್ರಿ 9.51ಕ್ಕೆ ಈ ಚಿತ್ರವನ್ನು ಪೋಸ್ಟ್ ಮಾಡಿರುವುದು ಗೊತ್ತಾಯಿತು. ಶುಕ್ರವಾರ ಈ ಬಗ್ಗೆ ಸೂಚನೆ ನೀಡಿರುವ ಪಿಟಿಐ, ‘ಇದು ಸುಳ್ಳು ಚಿತ್ರ. ಇದನ್ನು ಅಳಿಸಿಹಾಕಿ’ ಎಂದು ಕೋರಿದೆ.