ಅಯೋಧ್ಯೆ: ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ವಿಧಿವಿಧಾನಗಳು ಆರಂಭವಾಗಿವೆ. ಈ ಕಾರ್ಯಕ್ರಮದಲ್ಲಿ ದೇಶದ 14 ದಂಪತಿ ಯಜಮಾನರಾಗಿ ಪಾಲ್ಗೊಳ್ಳುತ್ತಿದ್ದಾರೆ.
ಮುಖ್ಯ ಪ್ರಾಣ ಪ್ರತಿಷ್ಠಾಪನಾ ಪೂಜೆಯಲ್ಲಿ, 14 ದಂಪತಿ ಭಾಗವಹಿಸಲಿದ್ದಾರೆ. ಅವರು ಭಾರತದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ಭಾಗದಿಂದ ಬಂದವರು. ಅವರು ಮುಖ್ಯ ಯಜಮಾನರಾಗಿರುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಕರ್ನಾಟಕದ ದಂಪತಿಗೂ ಅವಕಾಶ
14 ಜೋಡಿಗಳಲ್ಲಿ ಕರ್ನಾಟಕದ ದಂಪತಿಯೂ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದ ಲಿಂಗರಾಜ್ ಬಸವರಾಜ್ ಎನ್ನುವವರು ಪತ್ನಿಯೊಂದಿಗೆ ಈ ಕಾರ್ಯಕ್ರಮದಲ್ಲಿ ಯಜಮಾನರಾಗಿ ಭಾಗಿಯಾಗುತ್ತಿದ್ದಾರೆ.
ಮಹಾರಾಷ್ಟ್ರದ ಲಾತೂರ್ನಲ್ಲಿರುವ ಘುಮಂತು ಸಮಾಜ ಟ್ರಸ್ಟ್ನಿಂದ ಮಹದೇವ್ ರಾವ್ ಗಾಯಕ್ವಾಡ್, ಲಕ್ನೋದಿಂದ ದಿಲೀಪ್ ವಾಲ್ಮೀಕಿ, ಡೊಮ್ ರಾಜನ ಕುಟುಂಬದ ಅನಿಲ್ ಚೌಧರಿ, ಕಾಶಿಯ ಕೈಲಾಶ್ ಯಾದವ್ ದಂಪತಿ ಮತ್ತು ರವೀಂದ್ರ ಪ್ರತಾಪ್ ಸಿಂಗ್ ದಂಪತಿ, ಹರಿಯಾಣದ ಅರುಣ್ ಚೌಧರಿ ಪಟ್ಟಿಯಲ್ಲಿದ್ದಾರೆ.
ಇನ್ನು, ಉದಯಪುರದ ರಾಮಚಂದ್ರ ಖರಾಡಿ, ಅಸ್ಸಾಂನ ರಾಮ್ ಕುಯಿ ಜೆಮಿ, ಜೈಪುರದ ಗುರುಚರಣ್ ಸಿಂಗ್ ಗಿಲ್, ಹರ್ದೋಯಿಯಿಂದ ಕೃಷ್ಣ ಮೋಹನ್, ಮುಲ್ತಾನಿಯಿಂದ ರಮೇಶ್ ಜೈನ್, ತಮಿಳುನಾಡಿನಿಂದ ಅಡಲರಸನ್ ಮತ್ತು ಮಹಾರಾಷ್ಟ್ರದಿಂದ ವಿಠ್ಠಲ್ ರಾವ್ ಕಮ್ನ್ಲೆ ಎನ್ನವ ದಂಪತಿ ಯಜಮಾನರಾಗಲಿದ್ದಾರೆ.