ನವದೆಹಲಿ: ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿರುವ 1983ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡ, ಕುಸ್ತಿಪಟುಗಳಿಗೆ ಎದುರಾದ ದೌರ್ಜನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ವಿಶ್ವಕಪ್ ವಿಜೇತ ತಂಡ ಹೇಳಿಕೆ ಬಿಡುಗಡೆಗೊಳಿಸಿದೆ. ಈ ಕುರಿತು ಸುದ್ದಿಸಂಸ್ಥೆ 'ಎಎನ್ಐ' ಟ್ವೀಟ್ ಮಾಡಿದೆ.
ನಮ್ಮ ಚಾಂಪಿಯನ್ ಕುಸ್ತಿಪಟುಗಳನ್ನು ನಡೆಸಿಕೊಂಡ ದೃಶ್ಯಗಳಿಂದ ವಿಚಲಿತರಾಗಿದ್ದೇವೆ. ಕಷ್ಟಪಟ್ಟು ಗಳಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಯೋಚಿಸುತ್ತಿರುವ ಬಗ್ಗೆ ಮತ್ತಷ್ಟು ಕಳವಳಗೊಂಡಿದ್ದೇವೆ. ಈ ಪದಕಗಳು ಹಲವು ವರ್ಷಗಳ ಕಠಿಣ ಪರಿಶ್ರಮ, ತ್ಯಾಗ, ದೃಢತೆ ಹಾಗೂ ಧೈರ್ಯವನ್ನು ಒಳಗೊಂಡಿದೆ. ಇದು ಅವರಿಗಷ್ಟೇ ಅಲ್ಲದೆ ದೇಶದ ಹೆಮ್ಮೆ. ಈ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ವಿನಂತಿಸುತ್ತೇವೆ. ಶೀಘ್ರದಲ್ಲೇ ವಿವಾದ ಬಗೆಹರಿಯಲಿದೆ ಎಂದು ಆಶಿಸುತ್ತೇವೆ ಎಂದು ಪ್ರಕಟಣೆ ಹೇಳಿದೆ.
ಕುಸ್ತಿಪಟುಗಳು ತಾವು ಗಳಿಸಿದ ಪದಕಗಳನ್ನು ಎಸೆಯಲು ನಿರ್ಧರಿಸಿದ್ದು, ತೀವ್ರ ದುಃಖವನ್ನುಂಟು ಮಾಡಿದೆ. ಪದಕ ಗೆಲ್ಲುವುದು ಸುಲಭವಲ್ಲ. ಹಾಗಾಗಿ ಪದಕ ಎಸೆಯುವುದನ್ನು ನಾವು ಬೆಂಬಲಿಸುವುದಿಲ್ಲ. ಆದಷ್ಟು ಬೇಗನೇ ಈ ವಿವಾದ ಬಗೆಹರಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ ಲಾಲ್ ಹೇಳಿದ್ದಾರೆ.