ಭುವನೇಶ್ವರ: ‘ಕೋವಿಡ್ 19‘ ಲಸಿಕೆ ಪಡೆದ ಒಡಿಶಾದ ಜಗತ್ಸಿನಂಗ್ಪುರ ಮತ್ತು ಬಾರಗಡ ಜಿಲ್ಲೆಯ ಇಬ್ಬರು ಆಶಾ ಕಾರ್ಯಕರ್ತೆಯರಲ್ಲಿ ಅಡ್ಡಪರಿಣಾಮ ಕಾಣಿಸಿಕೊಂಡ ಕಾರಣ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
45ರ ಹರೆಯದ ಇಬ್ಬರು ಆಶಾ ಕಾರ್ಯಕರ್ತೆಯರು ಜನವರಿ 19ರಂದು ಲಸಿಕೆ ತೆಗೆದುಕೊಂಡಿದ್ದರು. ಲಸಿಕೆ ತೆಗೆದುಕೊಂಡ ದಿನದಿಂದ ಪ್ರತಿ ದಿನ ಅವರಿಬ್ಬರಿಗೆ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಜತೆಗೆ ಮೂರ್ಛೆ ಹೋಗುತ್ತಿದ್ದರು. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರಗಡ ಜಿಲ್ಲೆಯ ಕೋವಿಡ್ ಲಸಿಕೆ ಪಡೆದ 27 ವರ್ಷದ ಸ್ಟಾಫ್ ನರ್ಸ್ ಒಬ್ಬರಿಗೆ, ಲಸಿಕೆ ಪಡೆದ ದಿನವೇ ಜ್ವರ ಕಾಣಿಸಿಕೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.