ನವದೆಹಲಿ: 2016ರಲ್ಲಿ ₹2000 ನೋಟುಗಳನ್ನು ಚಲಾವಣೆಗೆ ತಂದಿರುವ ಕ್ರಮವನ್ನು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ’ಮೂರ್ಖತನ’ ಎಂದು ಕರೆದಿದ್ದಾರೆ. ₹2000 ಮುಖಬೆಲೆಯು ಕಪ್ಪುಹಣ ಹೊಂದಿರುವವರಿಗೆ ಮಾತ್ರ ಸುಲಭವಾಗಿ ಹಣ ಕೂಡಿಡಲು ಸಹಾಯ ಮಾಡಿದೆ. ಅಲ್ಲದೆ, ಈಗ ಅವರಿಗೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ‘ರತ್ನಗಂಬಳಿ ಹಾಸಿ ಸ್ವಾಗತ’ ಮಾಡಿದಂತಾಗಿದೆ ಎಂದು ಸೋಮವಾರ ಆರೋಪಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ₹2,000 ನೋಟುಗಳನ್ನು ಹಿಂತೆಗೆದುಕೊಳ್ಳುವ ಅನಿರೀಕ್ಷಿತ ಘೋಷಣೆ ಮಾಡಿದೆ. ಆದರೆ, ಸಾರ್ವಜನಿಕರಿಗೆ ₹2000 ನೋಟುಗಳನ್ನು ಖಾತೆಗಳಿಗೆ ಜಮಾ ಮಾಡಲು ಮತ್ತು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಸಮಯಾವಕಾಶ ನೀಡಿದೆ. ₹2000 ನೋಟುಗಳನ್ನು ವಿತರಿಸುವುದನ್ನು ನಿಲ್ಲಿಸುವಂತೆ ಬ್ಯಾಂಕುಗಳಿಗೆ ಆರ್ಬಿಐ ನಿರ್ದೇಶಿಸಿತ್ತು. ಇದನ್ನು ವಿರೋಧಿಸಿ ಮಾಜಿ ವಿತ್ತ ಸಚಿವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘₹2000 ನೋಟುಗಳನ್ನು ಬದಲಾಯಿಸಲು ಯಾವುದೇ ಗುರುತಿನ ಚೀಟಿ, ಪುರಾವೆಗಳ ಅಗತ್ಯವಿಲ್ಲ ಎಂದು ಬ್ಯಾಂಕ್ಗಳು ಸ್ಪಷ್ಟಪಡಿಸಿವೆ. ಕಪ್ಪುಹಣವನ್ನು ಬಹಿರಂಗಪಡಿಸಲು ₹2000 ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಬಿಜೆಪಿಯ ವಾದ ನೆಲಸಮವಾಗಿದೆ’ ಎಂದು ಟ್ವಿಟರ್ ಪೋಸ್ಟ್ನಲ್ಲಿ ಚಿದಂಬರಂ ಟೀಕಿಸಿದ್ದಾರೆ.
Banks have clarified that no identity, no forms and no proof will be required to exchange the Rs 2000 notes
— P. Chidambaram (@PChidambaram_IN) May 22, 2023
The BJP's spin that the Rs 2000 notes are being withdrawn to unearth black money stands demolished
Ordinary people do not have Rs 2000 notes. They shunned it soon after…
ಸಾಮಾನ್ಯ ಜನರ ಬಳಿ ₹2000 ನೋಟುಗಳಿಲ್ಲ, ಏಕೆಂದರೆ, ದೈನಂದಿನ ಚಿಲ್ಲರೆ ವಿನಿಮಯಕ್ಕೆ ಅದು ನಿಪ್ಪ್ರಯೋಜಕ. 2016ರಲ್ಲಿ ಚಲಾವಣೆಗೆ ಬಂದಾಗಿನಿಂದ ಅವುಗಳನ್ನು ದೂರವಿಟ್ಟಿದ್ದಾರೆ ಎಂದು ಚಿದಂಬರಂ ಹೇಳಿದರು.
‘ಹಾಗಾದರೆ, ₹2000 ನೋಟುಗಳನ್ನು ಇಟ್ಟುಕೊಂಡು ಅವುಗಳನ್ನು ಯಾರು ಬಳಸಿದ್ದಾರೆ? ನಿಮಗೆ ಉತ್ತರ ತಿಳಿದಿದೆ. ₹2,000 ನೋಟು ಕಪ್ಪು ಹಣ ಉಳ್ಳವರಿಗೆ ತಮ್ಮ ಹಣವನ್ನು ಸುಲಭವಾಗಿ ಸಂಗ್ರಹಿಸಲು ಸಹಾಯ ಮಾಡಿದೆ’ ಎಂದು ಚಿದಂಬರಂ ಹೇಳಿದ್ದಾರೆ.
‘₹2,000 ನೋಟು ಹೊಂದಿರುವವರಿಗೆ ತಮ್ಮ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಕೆಂಪು ಹಾಸಿನ ಮೇಲೆ ಸ್ವಾಗತಿಸಲಾಗುತ್ತಿದೆ. 2016ರಲ್ಲಿ ₹2000 ನೋಟು ಚಲಾವಣೆಗೆ ತಂದದ್ದು ಮೂರ್ಖತನದ ಕ್ರಮವಾಗಿತ್ತು, ಕನಿಷ್ಠ ಏಳು ವರ್ಷಗಳ ನಂತರವಾದರೂ ಈ ಮೂರ್ಖ ಕ್ರಮವನ್ನು ಹಿಂತೆಗೆದುಕೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ’ ಎಂದು ಚಿದಂಬರಂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.