ನವದೆಹಲಿ: ‘ಉಗ್ರರ ದಾಳಿ ಬೆದರಿಕೆ ಇದ್ದರೂ 2019ರಲ್ಲಿ ಸಿಆರ್ಪಿಎಫ್ನ 40 ಮಂದಿ ಯೋಧರ ಪ್ರಯಾಣಕ್ಕೆ ವಿಮಾನ ಒದಗಿಸದೇ ರಸ್ತೆ ಮೂಲಕವೇ ತೆರಳಲು ಅವಕಾಶ ನೀಡಿದ್ದು ಏಕೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ್ದು ಕನಿಷ್ಠ ಆಡಳಿತ, ಗರಿಷ್ಠ ಮೌನ’ ಎಂದು ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿಕೆ ಕುರಿತು ಸರ್ಕಾರ ಪ್ರತಿಕ್ರಿಯಿಸಲಿ ಎಂದಿದ್ದಾರೆ.
ಪಕ್ಷದ ಮುಖಂಡರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನಾಥ ಅವರ ಜೊತೆಗೂಡಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಹೆಸರಿನಲ್ಲಿ ಕಟ್ಟಡ ನಿರ್ಮಿಸುತ್ತಿದೆ. ಆದರೆ, ಪ್ರಜಾಪ್ರಭುತ್ವವೇ ಕಾಣೆಯಾಗಿದೆ’ ಎಂದು ಹೇಳಿದರು.
ವಿಶ್ವಗುರು ಅವರು ಪ್ರಜಾಪ್ರಭುತ್ವದ ಹೊಸ ಮಾದರಿ ಹುಟ್ಟುಹಾಕಿದ್ದಾರೆ. ಅಲ್ಲಿ ಪ್ರಜಾಪ್ರಭುತ್ವದ ಕುರುಹಾಗಿ ಕಟ್ಟಡಗಳಿವೆ. ಪ್ರಜಾಪ್ರಭುತ್ವದ ಮೂಲವೇ ಕಾಣೆಯಾಗಿದೆ ಎಂದರು.
ಪುಲ್ವಾಮಾ ಯೋಧರ ಪ್ರಯಾಣಕ್ಕೆ ಏಕೆ ವಿಮಾನ ನಿರಾಕರಿಸಲಾಯಿತು? ಜೈಶ್ ಸಂಘಟನೆ ಬೆದರಿಕೆ ಕಡೆಗಣಿಸಿದ್ದೇಕೆ? ತನಿಖೆ ಆರಂಭವಾಗಿ ನಾಲ್ಕು ವರ್ಷಗಳಾಯಿತು, ಈಗ ಯಾವ ಹಂತದಲ್ಲಿದೆ. ಯಾರನ್ನು ಹೊಣೆಗಾರನಾಗಿಸಿದ್ದೀರಿ? ಎಂದು ಪ್ರಶ್ನಿಸಿದರು.