ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚ ರಾಜ್ಯ ಚುನಾವಣೆ: ಇಂದು ಮತ ಎಣಿಕೆ– ಗರಿಗೆದರಿದ ಕುತೂಹಲ

ಉತ್ತರಪ್ರದೇಶ: ಇವಿಎಂ ಸಾಗಣೆಯಲ್ಲಿ ಲೋಪ- ಅಧಿಕಾರಿಗಳ ವಿರುದ್ಧ ಕ್ರಮ
Last Updated 10 ಮಾರ್ಚ್ 2022, 1:52 IST
ಅಕ್ಷರ ಗಾತ್ರ

ಲಖನೌ/ವಾರಾಣಸಿ (ಪಿಟಿಐ): ಉತ್ತರ ಪ್ರದೇಶ ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನದಲ್ಲಿ ಬಳಸಲಾಗಿದ್ದ ಮತಯಂತ್ರಗಳ ಸಾಗಣೆ ಮತ್ತು ನಿರ್ವಹಣೆಯಲ್ಲಿ ಲೋಪವಾಗಿರುವ ಕೆಲವು ಘಟನೆಗಳು ವರದಿಯಾಗಿವೆ. ನಿಯಮಗಳನ್ನು ಪಾಲಿಸುವಲ್ಲಿ ಲೋಪವಾಗಿದೆ ಎಂಬುದನ್ನು ವಾರಾಣಸಿ, ಸೋನಭದ್ರಾ ಮತ್ತು ಬರೇಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.ಈ ಸಂಬಂಧ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಸಮಾಜವಾದಿ ಪಕ್ಷವು ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿತ್ತು.

‘ಮತಯಂತ್ರಗಳನ್ನು ತಿರುಚುವ ಉದ್ದೇಶದಿಂದ ಅಕ್ರಮವಾಗಿ, ಅವುಗಳನ್ನು ಸ್ಟ್ರಾಂಗ್‌ರೂಂಗಳಿಂದ ಸಾಗಿಸಲಾಗಿದೆ. ವಾರಾಣಸಿಯ ಪಹಾಡಿಯಾ ಎಣಿಕಾ ಕೇಂದ್ರದಿಂದ ಮೂರು ಟ್ರಕ್‌ಗಳಲ್ಲಿ ಮತಯಂತ್ರಗಳನ್ನು ಸಾಗಿಸಲಾಗಿದೆ. ಒಂದು ಟ್ರಕ್‌ ಅನ್ನು ನಮ್ಮ ಪಕ್ಷದ ಕಾರ್ಯಕರ್ತರು ತಡೆದು ನಿಲ್ಲಿಸಿದ್ದಾರೆ. ಎರಡು ಟ್ರಕ್‌ಗಳು ಅಲ್ಲಿಂದ ಪರಾರಿಯಾಗಿವೆ. ಆ ಟ್ರಕ್‌ಗಳು ಮತ್ತು ಅದರಲ್ಲಿ ಇದ್ದ ಮತಯಂತ್ರಗಳು ನಾಪತ್ತೆಯಾಗಿವೆ. ವಾರಾಣಸಿ ಜಿಲ್ಲಾಧಿಕಾರಿ ಮತ್ತು ವಾರಾಣಸಿ ವಿಭಾಗೀಯ ಆಯುಕ್ತರನ್ನು ವರ್ಗಾವಣೆ ಮಾಡಬೇಕು’ ಎಂದು ಸಮಾಜವಾದಿ ಪಕ್ಷದ ನಿಯೋಗವು ದೂರಿನಲ್ಲಿ ಆಗ್ರಹಿಸಿತ್ತು.

‘ಲೋಪವಾಗಿರುವುದನ್ನು ಪರಿಶೀಲಿಸಿ, ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಚುನಾವಣಾ ಅಧಿಕಾರಿ ಹೇಳಿದ್ದರು.

ಏಳನೇ ಹಂತದಲ್ಲಿ ಮತದಾನ ನಡೆದಿದ್ದ ವಾರಾಣಸಿಯ ಪಹಾಡಿಯಾದ ಸ್ಟ್ರಾಂಗ್‌ರೂಂ ಇದ್ದ ಸ್ಥಳದಿಂದ ಮಂಗಳವಾರ ರಾತ್ರಿ ಮೂರು ಟ್ರಕ್‌ಗಳಲ್ಲಿ ಮತಯಂತ್ರಗಳನ್ನು ಸಾಗಿಸಲಾಗಿತ್ತು. ಅವುಗಳಲ್ಲಿ ಒಂದು ಟ್ರಕ್‌ ಅನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು. ಆ ಟ್ರಕ್‌ನಲ್ಲಿದ್ದ ಮತಯಂತ್ರಗಳನ್ನು ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲು ಒಯ್ಯಲಾಗುತ್ತಿತ್ತು ಎಂದು ವಾರಾಣಸಿ ಜಿಲ್ಲಾಧಿಕಾರಿ ಕೌಶಲ್ ರಾಜ್‌ ಶರ್ಮಾ ಮಂಗಳವಾರ ಸ್ಪಷ್ಟನೆ ನೀಡಿದ್ದರು. ಆದರೆ,ವಾರಾಣಸಿ ವಿಭಾಗೀಯ ಆಯುಕ್ತ ದೀಪಕ್ ಅಗರ್ವಾಲ್‌ ಅವರು ನೀಡಿರುವ ಹೇಳಿಕೆಯು ಇದಕ್ಕೆ ವ್ಯತಿರಿಕ್ತವಾಗಿದೆ. ಅವರು, ‘ಮತಗಟ್ಟೆಗಳಲ್ಲಿ ಇದ್ದ ಹೆಚ್ಚುವರಿ ಮತ್ತು ಬಳಕೆಯಾಗದೇ ಇದ್ದ ಮತಯಂತ್ರಗಳನ್ನು ಮಾತ್ರ ಸಾಗಿಸಲಾಗಿದೆ. ಮತದಾನದಲ್ಲಿ ಬಳಕೆಯಾಗಿದ್ದ ಮತಯಂತ್ರಗಳು ಸ್ಟ್ರಾಂಗ್‌ರೂಂನಲ್ಲಿ ಭದ್ರವಾಗಿವೆ’ ಎಂದು ಹೇಳಿದ್ದಾರೆ.

ಕಸ ಸಾಗಿಸುವ ವಾಹನದಲ್ಲಿ ಮತಯಂತ್ರಗಳು:ಬರೇಲಿ ಜಿಲ್ಲೆಯ ಸ್ಟ್ರಾಂಗ್‌ರೂಂನ ಸಮೀಪ ನಿಲುಗಡೆ ಮಾಡಲಾಗಿದ್ದ ಕಸ ಸಾಗಿಸುವ ವಾಹನದಲ್ಲಿ ಮತಯಂತ್ರಗಳು ಇದ್ದ ಮೂರು ಪೆಟ್ಟಿಗೆಗಳನ್ನು ಮುಚ್ಚಿಟ್ಟಿದ್ದು ಪತ್ತೆಯಾಗಿದೆ. ಸ್ಟ್ರಾಂಗ್‌ರೂಂ ಸಮೀಪ ನಿಲ್ಲಿಸಿದ್ದ ವಾಹನವನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ಪರಿಶೀಲಿಸಿದ್ದಾರೆ. ಪೆಟ್ಟಿಗೆಗಳನ್ನು ವಾಹನದಿಂದ ತೆಗೆಯುತ್ತಿರುವ ಹಲವು ವಿಡಿಯೊಗಳನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ಟ್ವೀಟ್ ಮಾಡಿದ್ದಾರೆ. ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಐದು ರಾಜ್ಯಗಳಲ್ಲಿ ಇಂದು ಮತಎಣಿಕೆ

ನವದೆಹಲಿ (ಪಿಟಿಐ): ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಪತ್ರಗಳ ಎಣಿಕೆ ನಡೆಯಲಿದೆ. ‌

ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಒಟ್ಟು 1,200 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 50 ಸಾವಿರ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಎಲ್ಲ ರಾಜ್ಯಗಳಲ್ಲಿ ಒಟ್ಟು 650ಕ್ಕೂ ಹೆಚ್ಚು ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ.

ಫೆ. 10ರಿಂದ ಮಾರ್ಚ್ 7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. 403 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 750ಕ್ಕೂ ಹೆಚ್ಚು ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಪಂಜಾಬ್‌ನಲ್ಲಿ 200 ಮತ ಎಣಿಕೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಚುನಾವಣಾ ಆಯೋಗ ಸೂಚಿಸಿದೆ. ಲಸಿಕೆ ಹಾಕಿಸಿಕೊಂಡಿದ್ದರೂ, ಜ್ವರ, ನೆಗಡಿಯ ಲಕ್ಷಣ ಕಂಡುಬಂದವರು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವಂತಿಲ್ಲ.

ಕರ್ತವ್ಯದಿಂದ ಬಿಡುಗಡೆ

ಸಮಾಜವಾದಿ ಪಕ್ಷ ನೀಡಿದ ದೂರಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಆಯೋಗದ ಸೂಚನೆಯನ್ವಯ ಮೂವರು ಅಧಿಕಾರಿಗಳನ್ನು ಬದಲಿಸಿ ಬೇರೆಯವರನ್ನು ನೇಮಿಸಲಾಗಿದೆ.ವಾರಾಣಸಿಯ ಇವಿಎಂ ನೋಡಲ್ ಅಧಿಕಾರಿ, ಸೋನಭದ್ರದ ರಿಟರ್ನಿಂಗ್ ಅಧಿಕಾರಿ ಹಾಗೂ ಬರೇಲಿ ಜಿಲ್ಲೆಯ ಹೆಚ್ಚುವರಿ ಚುನಾವಣಾ ಅಧಿಕಾರಿಯನ್ನು ಕರ್ತವ್ಯದಿಂದ ತೆರವು ಮಾಡಲಾಗಿದೆ.

ಇವಿಎಂ ಸಾಗಾಟದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ನಳಿನಿ ಕಾಂತ್ ಸಿಂಗ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ಮತ ಎಣಿಕೆ ಕೇಂದ್ರಗಳಿಗೆ ಹೋಗದಂತೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ. ಇವಿಎಂ ನೋಡಲ್ ಅಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಅವರನ್ನು ನೇಮಿಸಲಾಗಿದೆ.

ಬರೇಲಿಯ ಹೆಚ್ಚುವರಿ ಚುನಾವಣಾ ಅಧಿಕಾರಿ ವಿ.ಕೆ ಸಿಂಗ್ ಅವರನ್ನು ಹಾಗೂ ರಿಟರ್ನಿಂಗ್ ಅಧಿಕಾರಿ ರಮೇಶ್ ಕುಮಾರ್ ಅವರನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT