ದಿಯು: ಅತ್ಯಂತ ಪ್ರಾಮಾಣಿಕವಾಗಿ ಇರುವುದಾಗಿ ಹೇಳಿ ಅಧಿಕಾರಕ್ಕೇರಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭ್ರಷ್ಟಾಚಾರದ ದ್ಯೋತಕವಾಗಿ ಬದಲಾಗಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಗುರುವಾರ ಆರೋಪಿಸಿದ್ದಾರೆ.
ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರ ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್ಗಳನ್ನು ತೆರೆಯುವ ವೇಳೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದೆಹಲಿ ಲೆಫ್ಟಿನಂಟ್ ಗವರ್ನರ್ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ಇದನ್ನು ಉಲ್ಲೇಖಿಸಿ ಠಾಕೂರ್ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ತಮ್ಮನ್ನು ತಾವು ಅತ್ಯಂತ ಪ್ರಾಮಾಣಿಕರೆಂದು ಹೇಳಿಕೊಂಡು ರಾಜಕೀಯಕ್ಕೆ ಬಂದ ಕೇಜ್ರಿವಾಲ್ ಮತ್ತು ಅವರ ಸರ್ಕಾರ ಇದೀಗ, ಭ್ರಷ್ಟಾಚಾರದ ದ್ಯೋತಕವಾಗಿ ಬದಲಾಗಿದ್ದಾರೆ' ಎಂದು ದೂರಿದ್ದಾರೆ.
ಮೊಹಲ್ಲಾ ಕ್ಲಿನಿಕ್ ವಿಚಾರವಾಗಿ ಹರಿಹಾಯ್ದಿರುವ ಬಿಜೆಪಿ ನಾಯಕ, 'ಮೊದಲು ನಕಲಿ ಔಷಧ ಹಗರಣ ಬೆಳಕಿಗೆ ಬಂದಿತು. ಇದೀಗ ನಕಲಿ ಆರೋಗ್ಯ ತಪಾಸಣೆ ಬಹಿರಂಗಗೊಂಡಿದೆ. ಇದು ಜನರ ಬದುಕಿನ ಮೇಲಿನ ದಾಳಿಯಾಗಿದೆ. ಸರ್ಕಾರವೇ ನಕಲಿಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.