ಜೈಪುರ: ಸಾಮಾನ್ಯವಾಗಿ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸ್ ಇಲಾಖೆ ಲಕ್ಷಗಟ್ಟಲೆ ಹಣವನ್ನು ಬಹುಮಾನವಾಗಿ ನೀಡುವುದಾಗಿ ಘೋಷಣೆ ಮಾಡುತ್ತದೆ. ಆದರೆ ರಾಜಸ್ಥಾನದಲ್ಲಿ ಆರೋಪಿಯೊಬ್ಬನ ಪತ್ತೆ ಮಾಡಿದರೆ 50 ಪೈಸೆ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ಇಲ್ಲಿಯ ಸಿಂಘನಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಆರೋಪಿಯಾಗಿರುವ ಯೋಗೇಶ್ ಮೇಘವಾಲ್ ಪತ್ತೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಜುಂಜುನು ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ವಿಷ್ಣೋಯ್ ಅವರು ಈ ಹೊಸ ಪ್ರಯೋಗ ಮಾಡಿದ್ದು, ಆರೋಪಿಯನ್ನು ಪತ್ತೆ ಮಾಡಿದರೆ ಅಥವಾ ಆರೋಪಿ ಇರುವ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ 50 ಪೈಸೆ ಬಹುಮಾನ ನೀಡುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಈ ಮೂಲಕ, ‘ಸಮಾಜದಲ್ಲಿ ಆರೋಪಿಯ ಸ್ಥಾನಮಾನವು ಚಾಲ್ತಿಯಲ್ಲಿ ಇಲ್ಲದ 50 ಪೈಸೆಗೆ ಸಮ, ಹೀಗಾಗಿ ಅವರನ್ನು ಕಾನೂನಿಗೆ ಒಪ್ಪಿಸಿ ಎನ್ನುವ ಧನಾತ್ಮಕ ಸಂದೇಶವನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.