ಔರಂಗಬಾದ್:'ಅತ್ಯಾಚಾರಿಯ ಹೆಂಡತಿ ವಿಧವೆಯಾದಳು‘ ಎಂಬ ಹಣೆಪಟ್ಟಿ ಪಡೆಯಲು ಇಷ್ಟವಿಲ್ಲವೆಂದು ಕಾರಣ ನೀಡಿ ವಿಚ್ಛೇದನಕ್ಕಾಗಿ ‘ನಿರ್ಭಯಾ’ ಪ್ರಕರಣದ ಅಪರಾಧಿಗಳಲ್ಲೊಬ್ಬನ ಪತ್ನಿಯು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಅಪರಾಧಿಯನ್ನು ಮಾರ್ಚ್ 20ರಂದುಗಲ್ಲಿಗೇರಿಸಲು ನ್ಯಾಯಾಲಯ ತೀರ್ಪು ನೀಡಿತ್ತು. ಇದಕ್ಕೆ ಎರಡು ದಿನ ಇರುವಾಗ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಮಧ್ಯ ಬಿಹಾರದ ನಬೀನ್ ನಗರದ ನಿವಾಸಿ ಅಕ್ಷಯ್ ಠಾಕೂರ್ನ ಪತ್ನಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದು, ಗುರುವಾರ ಈ ಅರ್ಜಿಯ ವಿಚಾರಣೆ ನಡೆಯಲಿದೆ.
ಠಾಕೂರ್ ಪತ್ನಿಯ ವಕೀಲರಾದ ಮುಕೇಶ್ ಕುಮಾರ್ ಸಿಂಗ್, ಲೈಂಗಿಕ ಅಪರಾಧಗಳಿಗಾಗಿ ಶಿಕ್ಷೆಗೆ ಒಳಗಾದ ಪತ್ನಿಯು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನವರೆಗೂ ಠಾಕೂರ್ ಪತ್ನಿ ತನ್ನ ಗಂಡ ಮುಗ್ಧ ಎಂದೇ ವಾದಿಸಿದ್ದರು. ಈ ವಿಚ್ಛೇದನಾ ಅರ್ಜಿಯೂ ಗಲ್ಲು ಶಿಕ್ಷೆಯನ್ನು ಮುಂದೂಡಲು ಮಾಡಿರುವ ಒಂದು ತಂತ್ರ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅಕ್ಷಯ್ ಠಾಕೂರ್ ಸೇರಿ ಹಲವರು 2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿರುವ ಬಸ್ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸಿಕ್ಕಿಬಿದ್ದಿದ್ದರು.
ಇಂದು ವಿಚಾರಣೆ
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವವರ ಪೈಕಿ ಒಬ್ಬನ ದಯಾ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಿರುವ ಮರಣದಂಡನೆಯನ್ನು ರದ್ದುಗೊಳಿಸ ಬೇಕು ಎಂದು ಅಪರಾಧಿಗಳ ಪರ ವಕೀಲರು ಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ, ಹೆಚ್ಚುವರಿ ನ್ಯಾಯಾ ಧೀಶ ಧರ್ಮೇಂದ್ರ ರಾಣಾ ಅವರು ತಿಹಾರ್ ಜೈಲು ಅಧಿಕಾರಿಗಳು ಮತ್ತು ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ.
ಶಿಕ್ಷೆಗೆ ಒಳಗಾದವರ ಪೈಕಿ ಅಕ್ಷಯ್ ಸಿಂಗ್ ಎಂಬಾತ ರಾಷ್ಟ್ರಪತಿ ರಾಮ ನಾಥ ಕೋವಿಂದ್ ಅವರಿಗೆ ಮಂಗಳ ವಾರ ಎರಡನೇ ಬಾರಿ ದಯಾ ಅರ್ಜಿ ಸಲ್ಲಿಸಿದ್ದಾನೆ. ಅದೇ ದಿನ, ಮತ್ತೊಬ್ಬ ಅಪರಾಧಿಪವನ್ ಗುಪ್ತಾ ಸುಪ್ರೀಂಕೋರ್ಟ್ಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದ್ದಾನೆ. ‘ಅಪರಾಧ ನಡೆದ ಸಮಯದಲ್ಲಿ ನಾನು ಬಾಲಕ ನಾಗಿದ್ದೆ ಎಂಬ ನನ್ನ ವಾದವನ್ನು ಪರಿಗಣಿಸದೇ ಶಿಕ್ಷೆ ಪ್ರಕಟಿಸಿರುವುದನ್ನು ಮರುಪರಿಶೀಲಿ ಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿ ಸಿದ್ದನ್ನು ಪ್ರಶ್ನಿಸಿ ಆತ ಈ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದ್ದಾನೆ.
ಆದೇಶ ಕಾಯ್ದಿರಿಸಿದ ಹೈಕೋರ್ಟ್: ‘ಕೃತ್ಯ ನಡೆದ ದಿನ (2012ರ ಡಿ.16) ನಾನು ದೆಹಲಿಯಲ್ಲಿಯೇ ಇರಲಿಲ್ಲ. ನನ್ನ ಈ ವಾದ ಪರಿಗಣಿಸದೇ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ’ ಎಂದಿರುವ ಅಪರಾಧಿ ಮುಕೇಶ್, ನ್ಯಾಯಾಲಯದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ.
ಅಪರಾಧಿ ಮತ್ತು ದೆಹಲಿ ಸರ್ಕಾರದ ಪರ ವಕೀಲರ ವಾದಗಳನ್ನು ಆಲಿಸಿದ ನ್ಯಾಯ ಮೂರ್ತಿ ಬ್ರಿಜೇಶ್ ಸೇಠಿ, ಬುಧವಾರ ತಮ್ಮ ಆದೇಶವನ್ನು ಕಾಯ್ದಿರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.