ಅಯೋಧ್ಯಾ: ‘ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಬಿಜೆಪಿ ವರಿಷ್ಠರಾದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿಮನೋಹರ್ ಜೋಷಿ ಅವರು ಪಾಲ್ಗೊಳ್ಳುವ ಸಾಧ್ಯತೆ ಇಲ್ಲ’ ಎಂದು ರಾಮ ಮಂದಿರ ಟ್ರಸ್ಟ್ ಸೋಮವಾರ ತಿಳಿಸಿದೆ.
‘ವಯಸ್ಸು ಹಾಗೂ ಆರೋಗ್ಯದ ಕಾರಣಗಳಿಂದಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಈ ಇಬ್ಬರು ಹಿರಿಯರನ್ನು ಕೋರಿದ್ದು, ಅದಕ್ಕೆ ಸಮ್ಮತಿಸಿದ್ದಾರೆ’ ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಆಹ್ವಾನಿತರ ಕುರಿತ ವಿವರಗಳನ್ನು ನೀಡಿದ ರಾಯ್, ‘ಅಡ್ವಾಣಿ ಅವರಿಗೆ ಈಗ 96 ವರ್ಷ, ಜೋಷಿ ಅವರಿಗೆ ಮುಂದಿನ ತಿಂಗಳು 90 ವರ್ಷ ತುಂಬುತ್ತವೆ’ ಎಂದರು.
‘ಸಿದ್ಧತೆಗಳು ಜನವರಿ 15ರ ವೇಳೆಗೆ ಪೂರ್ಣಗೊಳ್ಳಲಿದ್ದು, ಪ್ರಾಣ ಪ್ರತಿಷ್ಟಾಪನೆಗೆ ಸಂಬಂಧಿಸಿದ ಪೂಜಾ ವಿಧಿಗಳು ಜ.16ರಿಂದ 22ರ ವರೆಗೆ ನಡೆಯಲಿವೆ’ ಎಂದು ತಿಳಿಸಿದ್ದಾರೆ.
ರಾಮ ಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಅಡ್ವಾಣಿ ಹಾಗೂ ಜೋಷಿ ಅವರು ಮುಂಚೂಣೀಯಲ್ಲಿದ್ದರು.