ನವದೆಹಲಿ: ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಬನ್ನಿ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟಿರುವ ರೈತ ಸಂಘಟನೆಯು, ಮಾತುಕತೆಯ ದಿನಾಂಕವನ್ನು ನಿಗದಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದೆ.
ದೆಹಲಿ ಗಡಿ ಪ್ರದೇಶಗಳಲ್ಲಿ ಠಿಕಾಣಿ ಹೂಡಿರುವ ರೈತರು ನವೆಂಬರ್ 26ರಿಂದಲೇ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಇದುವರೆಗೆ ಕೇಂದ್ರ ಸರ್ಕಾರದ ಜೊತೆಗೆ 11 ಸುತ್ತಿನ ಮಾತುಕತೆಗಳು ಜರುಗಿದರೂ ಒಮ್ಮತದ ನಿರ್ಧಾರ ಮೂಡಿಬಂದಿಲ್ಲ. ಇದರಿಂದಾಗಿ ಬಿಕ್ಕಟ್ಟು ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ಮುಖಂಡ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ಸದಸ್ಯ ಶಿವ ಕುಮಾರ್ ಕಕ್ಕಾ, ಪ್ರಧಾನಿ ಆಹ್ವಾನದ ಮೆರೆಗೆ ನಾವು ಮುಂದಿನ ಸುತ್ತಿನ ಮಾತುಕತೆಗೆ ಸಿದ್ಧರಾಗಿದ್ದೇವೆ. ಮುಂದಿನ ದಿನಾಂಕ ಹಾಗೂ ಸಮಯವನ್ನು ಸರ್ಕಾರ ನಮಗೆ ತಿಳಿಸಬೇಕು ಎಂದು ಹೇಳಿದರು.
ಸರ್ಕಾರದೊಂದಿಗೆ ಮಾತುಕತೆಯನ್ನು ನಾವು ಎಂದಿಗೂ ನಿರಾಕರಿಸಿಲ್ಲ. ನಮ್ಮನ್ನು ಕರೆದಾಗಲೆಲ್ಲಾ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ. ಈಗಲೂ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
ಕೊನೆಯದಾಗಿ ನಡೆದ 11ನೇ ಸುತ್ತಿನ ಮಾತುಕತೆಯಲ್ಲಿ ವಿವಾದಿತ ಕೃಷಿ ಕಾಯ್ದೆಯನ್ನು ಒಂದರಿಂದ ಒಂದು ವರೆ ವರ್ಷಗಳ ವರೆಗೆ ಅಮಾನತಿನಲ್ಲಿಡಲು ಕೇಂದ್ರ ಸರ್ಕಾರ ಪ್ರಸ್ತಾಪ ಮುಂದಿರಿಸಿತ್ತು. ಆದರೆ ಇದನ್ನು ರೈತ ಸಂಘಟನೆಗಳನ್ನು ತಿರಸ್ಕರಿಸಿದ್ದವು.
ಈ ನಡುವೆ ರಾಜ್ಯಸಭೆಯಲ್ಲಿ ನಡೆಸಿದ ಭಾಷಣದಲ್ಲಿ ರೈತರನ್ನು ಪ್ರಧಾನಿ ನರೇಂದ್ರ ಮೋದಿ ಆಂದೋಲನ ಜೀವಿಗಳು ಎಂಬ ಪದ ಬಳಕೆ ಮಾಡಿದ್ದರು. ಇದರ ವಿರುದ್ಧ ರೈತ ಮುಖಂಡರಿಂದ ಟೀಕೆ ವ್ಯಕ್ತವಾಗಿದೆ.