ಚೆನ್ನೈ: ಬಿಜೆಪಿ ಪಕ್ಷದೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಎಐಎಡಿಎಂಕೆ ನಾಯಕ ಡಿ. ಜಯಕುಮಾರ್ ಹೇಳಿದ್ದಾರೆ.
ಇದರೊಂದಿಗೆ ಬಿಜೆಪಿ ಹಾಗೂ ಎಐಎಡಿಎಂಕೆ ಪಕ್ಷಗಳ ನಡುವಣ ಒಳಜಗಳ ತಾರಕಕ್ಕೇರಿದೆ.
ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿರುವ ಜಯಕುಮಾರ್, ದಿವಂಗತ ಸಿಎಂ ಅಣ್ಣಾದುರೈ ಅವರಿಗೆ ಮಾಡಿದ ಅವಮಾನವನ್ನು ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ಬಯಸಿದರೂ ಅಣ್ಣಾಮಲೈ ಅವರು ಎಐಎಡಿಎಂಕೆ ಜೊತೆ ಮೈತ್ರಿ ಬಯಸುವುದಿಲ್ಲ. ಜೆ. ಜಯಲಲಿತಾ ಸೇರಿದಂತೆ ಎಐಎಡಿಎಂಕೆ ನಾಯಕರ ಬಗ್ಗೆ ಅಣ್ಣಾಮಲೈ ಟೀಕೆ ಮಾಡಿದ್ದಾರೆ. ನಮ್ಮ ನಾಯಕರ ವಿರುದ್ಧ ಮಾಡಿರುವ ಈ ಟೀಕೆಗಳನ್ನೆಲ್ಲ ಸಹಿಸಿಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾರೆ.
ನಾವೇಕೆ ಮೈತ್ರಿ ತೊಡಗಿಸಿಕೊಳ್ಳಬೇಕು ? ಬಿಜೆಪಿಗೆ ಇಲ್ಲಿ ನೆಲೆ ಇಲ್ಲ. ನಿಮಗೆಷ್ಟು ವೋಟ್ ಬ್ಯಾಂಕ್ ಇದೆ ಎಂಬುದು ಗೊತ್ತಿದೆ. ನಮ್ಮಿಂದಾಗಿಯೇ ಬಿಜೆಪಿ ಪರಿಚಿತವಾಗಿದೆ ಎಂದು ಹೇಳಿದ್ದಾರೆ.
ನಮ್ಮ ನಾಯಕರ ಬಗ್ಗೆ ಟೀಕೆಗಳನ್ನು ಸಹಿಸಲಾರೆವು. ಬಿಜೆಪಿ ಜೊತೆ ಮೈತ್ರಿ ಇಲ್ಲ. ಬಿಜೆಪಿ ಎಐಎಡಿಎಂಕೆ ಜೊತೆಗಿಲ್ಲ. ಈ ವಿಷಯ (ಮೈತ್ರಿ) ಕುರಿತು ಚುನಾವಣೆ ಸಂದರ್ಭದಲ್ಲಿ ಮಾತ್ರ ನಿರ್ಧರಿಸಬಹುದು. ಇದುವೇ ನಮ್ಮ ನಿಲುವು ಎಂದು ಹೇಳಿದ್ದಾರೆ.