ಕಾಕಿನಾಡ (ಆಂಧ್ರಪ್ರದೇಶ): ಸಾಮಾಜಿಕ ಭದ್ರತಾ ಪಿಂಚಣೆ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಾಸಿಕವಾಗಿ ₹ 3 ಸಾವಿರ ನೀಡುವ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಬುಧವಾರ ಚಾಲನೆ ನೀಡಿದ್ದಾರೆ.
ಕಾಕಿನಾಡದ ರಂಗರಾಯ ಮೆಡಿಕಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವೃದ್ಧರು, ವಿಧವೆಯರು ಸೇರಿದಂತೆ ಇತರರಿಗೆ ಈ ಯೋಜನೆಯಿಂದಾಗಿ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಈವರೆಗೂ ನೀಡಲಾಗುತ್ತಿದ್ದ ಮಾಸಿಕ ₹2,750 ಅನ್ನು ₹ 3 ಸಾವಿರಕ್ಕೆ ಹೆಚ್ಚಿಸಲು ಆಂಧ್ರಪ್ರದೇಶ ಸಚಿವ ಸಂಪುಟ ಇತ್ತೀಚೆಗೆ ನಿರ್ಧರಿಸಿತ್ತು.
ಈ ಯೋಜನೆಯಿಂದ 66 ಲಕ್ಷ ಜನರಿಗೆ ಸಹಾಯವಾಗಲಿದೆ. ಈ ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರದ ಅವಧಿಯಲ್ಲಿ ಕೇವಲ ₹1 ಸಾವಿರ ನೀಡಲಾಗುತ್ತಿತ್ತು ಎಂದು ಜಗನ್ ತಿಳಿಸಿದ್ದಾರೆ.
ವೈಎಸ್ಆರ್ ಪಿಂಚಣಿ ಕಾಣುಕ ಎಂಬ ಈ ಯೋಜನೆಯಡಿ ಹಿರಿಯ ನಾಗರಿಕರು, ವಿಧವೆಯರು, ಒಂಟಿ ಮಹಿಳೆಯರು, ಎಚ್ಐವಿ ಪೀಡಿತರು ಸೇರಿದಂತೆ ಇತರರು ಫಲಾನುಭವಿಗಳಾಗಿರುತ್ತಾರೆ.
ಬಡವರಿಗೆ 22 ಲಕ್ಷ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ ಆದರೆ ವಿರೋಧ ಪಕ್ಷಗಳು ಇದರಲ್ಲೂ ಭ್ರಷ್ಟಚಾರವಾಗಿದೆ ಎಂದು ಆರೋಪಿಸುತ್ತಾರೆ ಎಂದು ಜಗನ್ ಬೇಸರ ವ್ಯಕ್ತಪಡಿಸಿದ್ದಾರೆ.