ಅಮರಾವತಿ: ತೆಲುಗುದೇಶಂ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಕೌಶಲ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಕಣ್ಣು ಶಸ್ತ್ರಚಿಕಿತ್ಸೆಗಾಗಿ ಕೋರ್ಟ್ ಅವರಿಗೆ ಈ ಹಿಂದೆ ನಾಲ್ಕು ವಾರಗಳ ಅವಧಿಗೆ ಮಧ್ಯಂತರ ಜಾಮೀನು ನೀಡಿತ್ತು. ಇದನ್ನು ಪರಿವರ್ತಿಸಿ ಈಗ ಪೂರ್ಣ ಪ್ರಮಾಣದ ಜಾಮೀನು ಮಂಜೂರು ಮಾಡಿದೆ. ಮಾಜಿ ಮುಖ್ಯಮಂತ್ರಿ ಅವರ ವಯಸ್ಸು, ವಯೋಸಂಬಂಧ ಅನಾರೋಗ್ಯಗಳ ಕಾರಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಆದರೆ, ಕೌಶಲ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಬಾರದು, ಸಾರ್ವಜನಿಕ ರ್ಯಾಲಿ ಆಯೋಜಿಸಬಾರದು, ಸಭೆಗಳಲ್ಲಿ ಭಾಗವಹಿಸಬಾರದು ಎಂದು ಮಧ್ಯಂತರ ಜಾಮೀನಿನಲ್ಲಿ ವಿಧಿಸಿದ್ದ ಷರತ್ತು ನವೆಂಬರ್ 28ರವರೆಗೆ ಚಾಲ್ತಿಯಲ್ಲಿರುತ್ತದೆ. ನ. 29ರಿಂದ ಅನ್ವಯವಾಗುವಂತೆ ಸಡಿಲಗೊಳಿಸಲಾಗುತ್ತದೆ ಎಂದು ಕೋರ್ಟ್ ಆದೇಶಿಸಿದೆ.
ಅಲ್ಲದೆ, ವೈದ್ಯಕೀಯ ತಪಾಸಣಾ ವರದಿಗಳನ್ನು, ರಾಜಮಹೇಂದ್ರವರಂ ಕಾರಾಗೃಹದ ಸೂಪರಿಂಟೆಂಡೆಂಟ್ ಅವರಿಗೆ ಬದಲಾಗಿ, ವಿಜಯವಾಡದಲ್ಲಿ ವಿಶೇಷ ಕೋರ್ಟ್ಗೆ ಹಾಜರುಪಡಿಸಬಹುದು ಎಂದು ನಾಯ್ಡು ಅವರಿಗೆ ನಿರ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.