ಲಖನೌ: ಆ್ಯಪಲ್ ಕಂಪನಿ ಉದ್ಯೋಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆವಿವೇಕ್ ತಿವಾರಿಗೆ ಗುಂಡು ತಗುಲಿದ ಬಳಿಕವೂ ಸುಮಾರು 55 ನಿಮಿಷಗಳವರೆಗೂಜೀವಂತವಾಗಿದ್ದರು ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ಸಕಾಲದಲ್ಲಿ ಪೊಲೀಸರು ತಿವಾರಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಫಲರಾಗಿದ್ದರೆ ಎಂಬ ಅಂಶವನ್ನು ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗುಂಡು ತಗುಲಿದ ಬಳಿಕವೂತಿವಾರಿ 300 ಮೀಟರ್ಗಳವರೆಗೆ ಎಸ್ಯುವಿ ಕಾರನ್ನು ಚಲಾಯಿಸಿದ್ದರು, ನಂತರ ಅಂಡರ್ಪಾಸ್ ಸಮೀಪದ ಕಂಬವೊಂದಕ್ಕೆ ಡಿಕ್ಕಿ ಹೊಡೆದರು. ಬಳಿಕ ಕಾನ್ಸ್ಟೆಬಲ್ ಚೌಧರಿ ಮತ್ತು ಸಂದೀಪ್ ಕುಮಾರ್ ಕಾರಿನ ಸಮೀಪ ಬಂದು ನೋಡಿ ಅಲ್ಲಿಂದ ತೆರಳಿದರು ಎಂದು ಪ್ರತ್ಯಕ್ಷದರ್ಶಿ ಹಾಗೂ ಮಹಿಳಾ ಸಹೋದ್ಯೋಗಿ ಸನಾ ಖಾನ್ ತಿಳಿಸಿದ್ದಾರೆ.
ಸ್ವಲ್ಪ ಸಮಯದ ಬಳಿಕ ಪೊಲೀಸರಮತ್ತೊಂದು ಗಸ್ತು ವಾಹನ ಘಟನಾ ಸ್ಥಳಕ್ಕೆ ಆಗಮಿಸಿತು. ಆಗ ಪೊಲೀಸರು ಆ್ಯಂಬುಲೆನ್ಸ್ಗೆ ಕರೆ ಮಾಡಿದರು. ಒಂದು ವೇಳೆ ಪೊಲೀಸರು ಆ್ಯಂಬುಲೆನ್ಸ್ಗೆ ಕಾಯದೇ ವಿವೇಕ್ ಅವರಿದ್ದ ಕಾರಿನಲ್ಲೇ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದಿತ್ತು. ಆದರೆ ವಿವೇಕ್ ಚಿಕಿತ್ಸೆಗಿಂತಲೂ ನನ್ನ ಬಳಿ ಹೇಳಿಕೆ ಪಡೆದುಕೊಳ್ಳುವುದೇ ಪೊಲೀಸರಿಗೆ ಮುಖ್ಯವಾಗಿತ್ತು ಎಂದು ಸನಾ ಖಾನ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ಪ್ರಕಾರ ವಿವೇಕ್ ತಿವಾರಿಯನ್ನು 2.05 ನಿಮಿಷಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚು ಕಡಿವೆ ತಿವಾರಿಗೆ ಗುಂಡು ತಗುಲಿದ 35 ನಿಮಿಷಗಳ ನಂತರ ಆಸ್ಪತ್ರೆಗೆ ಕರೆತರಲಾಗಿತ್ತು. ಘಟನಾ ಸ್ಥಳದಿಂದ ಆಸ್ಪತ್ರೆ ತಲುಪಲು ಕೇವಲ 10 ನಿಮಿಷ ಸಾಕು ಎಂದು ಸನಾ ಖಾನ್ ಹೇಳುತ್ತಾರೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪೊಲೀಸರ ಗುಂಡು ತಿವಾರಿಯ ಎಡ ಭಾಗದ ಗದ್ದ ಮತ್ತು ಕೆಳ ದವಡೆಗೆ ತಗುಲಿ ತೀವ್ರವಾಗಿ ಗಾಯವಾಗಿತ್ತು. ವೈದ್ಯರು ಕುತ್ತಿಗೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಗುಂಡನ್ನು ಹೊರ ತೆಗೆದಿದ್ದಾರೆ. ತಿವಾರಿ ಗುಂಡು ತಗುಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ವೈದ್ಯರು ಹೇಳುವುದು ಏನು?
ಯಾವುದೇಅಪಘಾತ ಅಥವಾ ಗುಂಡಿನ ದಾಳಿ ಸಂಭವಿಸಿದಾಗ ಗಾಯಾಳುಗಳಿಗೆ ಘಟನೆ ನಡೆದ ಒಂದು ಗಂಟೆಯ ಒಳಗೆ ಚಿಕಿತ್ಸೆ ನೀಡಿದರೆ ಅವರು ಬದುಕುಳಿಯುವ ಸಾಧ್ಯತೆ ದುಪ್ಪಟಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಈ ಒಂದು ಗಂಟೆಯನ್ನು ಅಮೂಲ್ಯ ಸಮಯ ಎಂದು ಕರೆಯುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.