ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಪತ್ರದಲ್ಲಿ ಆದರ್ಶ ಹಗರಣ ಉಲ್ಲೇಖಿಸಿದ್ದರಿಂದ ಕಾಂಗ್ರೆಸ್ ತೊರೆದ ಚವಾಣ್: ಶರದ್

Published 21 ಫೆಬ್ರುವರಿ 2024, 23:30 IST
Last Updated 21 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಕೋಲ್ಹಾಪುರ: ಸಂಸತ್ತಿನಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಶ್ವೇತಪತ್ರದಲ್ಲಿ ಆದರ್ಶ ಹೌಸಿಂಗ್‌ ಸೊಸೈಟಿ ಹಗರಣದ ಪ್ರಸ್ತಾಪ ಇದ್ದಿದ್ದಕ್ಕೆ ಹೆದರಿ, ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಶರದ್‌ ಪವಾರ್‌ ಹೇಳಿದರು.

ಕಳೆದ ವಾರವಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಚವಾಣ್‌ ಅವರು ಈ ಕುರಿತು ಆರೋಪಗಳನ್ನು ಅಲ್ಲಗಳೆದಿದ್ದರು.

ಅಶೋಕ್ ಅವರು ಆದರ್ಶ ಹೌಸಿಂಗ್‌ ಸೊಸೈಟಿ ಹಗರಣದ ಆರೋಪಿಯಾಗಿದ್ದಾರೆ. ದಕ್ಷಿಣ ಮುಂಬೈನಲ್ಲಿ ರಕ್ಷಣಾ ಸಚಿವಾಲಯ ಒಡೆತನದ ಭೂಮಿಯಲ್ಲಿ ಅಗತ್ಯ ಅನುಮತಿಗಳನ್ನು ಪಡೆಯದೆ 31 ಅಂತಸ್ತಿನ ಐಷಾರಾಮಿ ಕಟ್ಟಡ ನಿರ್ಮಿಲಾಗಿದೆ ಎಂಬ ಆರೋಪ ಇದೆ. ಈ ಹಗರಣದ ಕಾರಣ ಅಶೋಕ್‌ ಚವಾಣ್‌ ಅವರು 2010ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

‘ಬಿಜೆಪಿ ಸೇರಿದ ಅಶೋಕ್ ಅವರ ನಡೆ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಆದರೆ ವೈಯಕ್ತಿಕವಾಗಿ ಅದು ನನಗೆ ಆಶ್ಚರ್ಯ ತರಲಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು. 

ಕಾಂಗ್ರೆಸ್‌ ಜತೆ ವಿಲೀನ ಇಲ್ಲ: ‘ನಾವು, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತು ಕಾಂಗ್ರೆಸ್‌ ಒಟ್ಟಿಗೇ ಇದ್ದೇವೆ; ಪ್ರತ್ಯೇಕವಾಗಿಲ್ಲ. ಹೆಚ್ಚಿನ ಸಮಯ ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ಆದರೆ ವಿಲೀನ ಅವಶ್ಯವಲ್ಲ’ ಎಂದು ಶರದ್‌ ಪವಾರ್‌ ಹೇಳಿದರು.

ಇತ್ತೀಚಿನ ಚಂಢೀಗಡ ಮೇಯರ್ ಚುನಾವಣೆಯು ಅಧಿಕಾರದ ದುರುಪಯೋಗಕ್ಕೆ ಉದಾಹರಣೆಯಂತಿದೆ ಎಂದ ಅವರು, ‘ಅಧಿಕಾರದಲ್ಲಿ ಇರುವವರು ಕುತಂತ್ರದಿಂದ ವಿರೋಧ ಪಕ್ಷವನ್ನು ಹತ್ತಿಕ್ಕಲು ಹೇಗೆಲ್ಲ ಪ್ರಯತ್ನಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಭಿನ್ನಾಭಿಪ್ರಾಯ ಶಮನಕ್ಕೆ ಯತ್ನ: ‘ಇಂಡಿಯಾ’ ಮೈತ್ರಿ ಕೂಟದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕೆಲ ರಾಜ್ಯಗಳಲ್ಲಿನ ಕೆಲ ಪಕ್ಷಗಳ ಹಿರಿಯ ನಾಯಕರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವುಗಳನ್ನು ಪರಿಹರಿಸಲು ಶ್ರಮಿಸಲಾಗುತ್ತಿದೆ’ ಎಂದು ಶರದ್‌ ಪವಾರ್‌ ತಿಳಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಹಲವು ವಿರೋಧ ಪಕ್ಷಗಳು ಸೇರಿ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿಕೊಂಡಿದ್ದೇವೆ. ಇದರ ರಚನೆ ತಡವಾಗಿ ಆಗಿಲ್ಲ ಎಂದು ಅವರು ಹೇಳಿದರು.

ಆಯಾ ರಾಜ್ಯಗಳಲ್ಲಿನ ತಮ್ಮ ಮಿತ್ರ ಪಕ್ಷಗಳ ಜತೆ ಚರ್ಚೆಗಳು ನಡೆಯಬೇಕಿದ್ದು, ಆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ಒಂದೆರಡು ರಾಜ್ಯಗಳಲ್ಲಿ ಕೆಲ ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆ ಸಮಸ್ಯೆಗಳನ್ನು ಪರಿಹರಿಸಲು ಆಗಿಲ್ಲ ಎಂದು ಅವರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT