ವಾರಾಣಸಿ: ಹೈಕೋರ್ಟ್ನ ಆದೇಶದಂತೆ ಜ್ಞಾನವಾಪಿ ಮಸೀದಿಯ ಆವರಣದ ಸಮೀಕ್ಷೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೋಮವಾರವೂ ಮುಂದುವರಿಸಿತು.
ಪ್ರಕರಣದ ಸ್ಥಳದ ಪಕ್ಕದಲ್ಲೇ ಇರುವ ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದ ಕಾರಣ, ಸಮೀಕ್ಷೆ ಕಾರ್ಯ ಮೂರು ಗಂಟೆ ವಿಳಂಬವಾಗಿ ಆರಂಭಗೊಂಡಿತು. ಮಸೀದಿಯ ಮೂರು ಗುಮ್ಮಟ ಹಾಗೂ ನೆಲಮಾಳಿಗೆಯ ಸಮೀಕ್ಷೆ ಕಾರ್ಯವನ್ನು ಭಾನುವಾರವೇ ಪೂರ್ಣಗೊಳಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕ ರಾಜೇಶ್ ಮಿಶ್ರಾ ತಿಳಿಸಿದ್ದಾರೆ.
‘ಸಮೀಕ್ಷೆಯಲ್ಲಿ ಸ್ಥಳದ ನಕ್ಷೆ, ಅದರ ಅಳತೆ ಹಾಗೂ ಛಾಯಾಚಿತ್ರಗಳನ್ನು ದಾಖಲಿಸಲಾಗಿದೆ. ಸಮೀಕ್ಷೆ ಕಾರ್ಯ ಇನ್ನೂ ಕೆಲವು ದಿನ ತೆಗೆದುಕೊಳ್ಳಲಿದೆ’ ಎಂದಿದ್ದಾರೆ.
‘ಸಮೀಕ್ಷೆ ಸಂದರ್ಭದಲ್ಲಿ ಹಿಂದು ದೇವರ ಮೂರ್ತಿ ಹಾಗೂ ತ್ರಿಶೂಲ ದೊರೆತಿದೆ ಎಂಬ ವದಂತಿ ಎಲ್ಲೆಡೆ ಹರಿದಾಡಿದೆ. ಅಧಿಕಾರಿಗಳು ಇಂಥ ವದಂತಿಗಳು ಹರಡದಂತೆ ತಡೆಯಬೇಕು. ಇಂಥ ಸುದ್ದಿಗಳು ಸಮಾಜದ ಸ್ವಾಸ್ಥ್ಯ ಕದಡುವ ಅಪಾಯ ಇರುವುದರಿಂದ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು’ ಎಂದು ಮುಸ್ಲಿಂ ಸಮುದಾಯದವರು ಆಗ್ರಹಿಸಿದ್ದಾರೆ.