ನವದೆಹಲಿ: ದೇಶದಲ್ಲಿನ ಅಂತರ್ಜಲ ಮೂಲಗಳ ಸುಸ್ಥಿರ ನಿರ್ವಹಣೆ ಗುರಿ ಹೊಂದಿರುವ ‘ಅಟಲ್ ಭೂಜಲ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.
ಈ ಯೋಜನೆ ಮೂಲಕ ನೀರು ಬಳಕೆದಾರರ ಸಂಘಗಳನ್ನು ರಚಿಸುವುದು, ನಿರ್ವಹಣೆ, ಅಂತರ್ಜಲ ಕುರಿತ ಮಾಹಿತಿಗಳನ್ನು ಹಂಚುವುದು, ಆಯಾ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನೀರು ರಕ್ಷಣಾ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು ಹೀಗೆ ವಿವಿಧ ಚಟುವಟಿಕೆಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಸಿಡಿಎಸ್ ಹುದ್ದೆ ರಚನೆಗೆ ಒಪ್ಪಿಗೆ
ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಹುದ್ದೆ ರಚಿಸಲು ರಕ್ಷಣಾ ಕ್ಷೇತ್ರದ ಸಂಪುಟ ಸಮಿತಿ (ಸಿಸಿಎಸ್) ಅನುಮೋದನೆ ದೊರಕಿದೆ.
ರಕ್ಷಣಾ ಸಚಿವಾಲಯದಡಿ ಸೇನಾ ವ್ಯವಹಾರಗಳ ಹೊಸ ವಿಭಾಗವನ್ನು ರಚಿಸಲು ಕೂಡ ಸರ್ಕಾರ ನಿರ್ಧರಿಸಿದೆ. ಸಿಡಿಎಸ್ ಇದರ ಕಾರ್ಯದರ್ಶಿಯಾಗಿರುತ್ತಾರೆ. ಸಿಡಿಎಸ್ ಹುದ್ದೆಯ ಹೊಣೆಗಳೇನು ಎಂದು ನಿಗದಿಪಡಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ಡೊಭಾಲ್ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ವರದಿಯನ್ನು ಸಿಸಿಎಸ್ ಅಂಗೀಕರಿಸಿದೆ.
ದೇಶದ ರಕ್ಷಣೆ ಹಾಗೂ ವ್ಯೂಹಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಹಾಗೂ ರಕ್ಷಣಾ ಸಚಿವರಿಗೆ ಸಲಹೆ ನೀಡುವ ಹೊಣೆ ಇವರದ್ದು.ಕಾರ್ಗಿಲ್ ಪರಿಶೀಲನಾ ಸಮಿತಿ 1999ರಲ್ಲಿ ನೀಡಿದ್ದ ಶಿಫಾರಸಿನ ಅನ್ವಯ ಈ ಹುದ್ದೆ ರಚಿಸಲಾಗುತ್ತಿದೆ.
ಅಂಕಿ–ಅಂಶಗಳು ಹಾಗೂ ಹೈಲೈಟ್ಸ್
*₹ 6,000 ಕೋಟಿಯೋಜನೆಯ ವೆಚ್ಚ
* ಒಟ್ಟು ಅಂತರ್ಜಲ ಮೂಲಗಳು
6584
*ಅತಿಯಾಗಿ ಬಳಕೆಯಾಗಿರುವುದು
1034; ಒಟ್ಟು
358- ತಮಿಳುನಾಡು,164 -ರಾಜಸ್ಥಾನ,105 -ಪಂಜಾಬ್,64 - ಹರಿಯಾಣ,43- ಕರ್ನಾಟಕ
ರೈಲ್ವೆ ಮಂಡಳಿ ಪುನರ್ರಚನೆ:ರೈಲ್ವೆ ಮಂಡಳಿ ಪುನರ್ರಚನೆಯಿಂದ, ವಿಭಾಗೀಕರಣ ಕೊನೆಗೊಂಡು ಕಾರ್ಯನಿರ್ವಹಣೆ ಸರಳವಾಗುತ್ತದೆ ರೈಲ್ವೆ ಸಚಿವಪಿಯೂಷ್ ಗೋಯಲ್ ತಿಳಿಸಿದ್ದಾರೆ.
ರೈಲ್ವೆ ಮಂಡಳಿ ಪುನರ್ರಚನೆಗೆ ಸಂಪುಟದ ಒಪ್ಪಿಗೆ ದೊರೆತಿದೆ. ಮುಖ್ಯಸ್ಥರು ಸೇರಿದಂತೆ ಮಂಡಳಿಯ ಸದಸ್ಯರ ಸಂಖ್ಯೆಯನ್ನು ಎಂಟರಿಂದ ಐದಕ್ಕೆ ಇಳಿಕೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.
‘ಪುನರ್ರಚನೆಯಿಂದಾಗಿವಿವಿಧ ವಿಭಾಗಗಳನ್ನು ವಿಲೀನಗೊಳಿಸಲು ಅವಕಾಶ ದೊರಕುತ್ತದೆ. ಸಂಚಾರ, ಎಂಜಿನಿಯರಿಂಗ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಸೇರಿದಂತೆ 8 ಸೇವಾ ವಿಭಾಗಗಳ ಬದಲಿಗೆ ‘ಭಾರತೀಯ ರೈಲ್ವೆ ಸೇವೆ’ ವ್ಯವಸ್ಥೆ ರಚಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.