ಶ್ರೀನಗರ: ಬ್ಯಾಂಕ್ ಅವ್ಯವಹಾರ ಪ್ರಕರಣ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಅಬ್ದುಲ್ ರಹೀಂ ರಾಥರ್ ಪುತ್ರ ಹಿಲಾಲ್ ರಾಥರ್ ನಿವಾಸದ ಮೇಲೆ ಗುರುವಾರ ದಾಳಿ ನಡೆಸಿದೆ.
ಕಾಶ್ಮೀರ, ಜಮ್ಮು, ದೆಹಲಿ ಮತ್ತು ಲುಧಿಯಾನದಲ್ಲಿರುವ 16 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಲಾಲ್ ರಾಥರ್ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.₹177 ಕೋಟಿ ಮೊತ್ತದ ಬ್ಯಾಂಕ್ ಹಣ ವಂಚನೆ ನಡೆಸಿದ್ದಾರೆ ಎಂದು ಹಿಲಾಲ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸುವುದರ ಜತೆಗೇಆದಾಯ ತೆರಿಗೆ ಇಲಾಖೆ ತನಿಖೆ ಕೈಗೊಂಡಿತ್ತು.
ನಿಯಮ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹಿಲಾಲ್ ರಾಥರ್ ಅವರು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕಿನ ಅಂದಿನ ಅಧಿಕಾರಿಗಳೊಂದಿಗೆ ಅಪರಾಧ ಕೃತ್ಯಗಳ ಪಿತೂರಿ ನಡೆಸಿದರು ಎಂದು ಸಿಬಿಐ ಆರೋಪಿಸಿದೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಹಣಕಾಸು ಸಚಿವರಾಗಿದ್ದ ಅವರ ತಂದೆ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮುಖಂಡರಾಗಿದ್ದಾರೆ.