ರಾಯಪುರ: ಛತ್ತೀಸಗಢದಲ್ಲಿ ಜನಾಂಗೀಯ ಸಂಘರ್ಷದಿಂದಾಗಿ ಕಳೆದ ವರ್ಷ ಭುನೇಶ್ವರ್ ಸಾಹು ಎಂಬ ಯುವಕ ಕೊಲೆಯಾಗಿದ್ದ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
‘ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಛತ್ತೀಸಗಢ ಸರ್ಕಾರದ ಮನವಿ ಮಾಡಿದ ಹಿನ್ನೆಲೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಏಪ್ರಿಲ್ 25ರಂದು ಆಧಿಸೂಚನೆ ಹೊರಡಿಸಿತ್ತು. ಶುಕ್ರವಾರ ಸಿಬಿಐ ಮತ್ತೆ ಪ್ರಕರಣ ದಾಖಲಿಸಿಕೊಂಡಿದೆ’ ಎಂದು ವಾರ್ತಾ ಇಲಾಖೆ ತಿಳಿಸಿದೆ.
ಪ್ರಕರಣವೇನು?: ಕಳೆದ ವರ್ಷ ಏಪ್ರಿಲ್ 8ರಂದು ಬಿರನ್ಪುರ ಗ್ರಾಮದಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಕೆಲ ಮಕ್ಕಳ ಮೇಲೆ ಇನ್ನೊಂದು ಜನಾಂಗದವರು ಹಲ್ಲೆ ನಡೆಸಿದ್ದರು. ಸ್ಥಳಕ್ಕೆ ತೆರಳಿದ್ದ ಸಾಹು ಮತ್ತು ಇತರರ ಮೇಲೆ ಕಲ್ಲು ತೂರಾಟ ನಡೆದಿತ್ತು.
ಬಳಿಕ 12 ಜನರು ಹರಿತವಾದ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿ ಸಾಹುವನ್ನು ಹತ್ಯೆ ಮಾಡಿದ್ದರು. ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.