ನವದೆಹಲಿ: ಭಾರತ ಜೋಡೊ ನ್ಯಾಯ ಯಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಮಣಿಪುರದತ್ತ ವಿಮಾನ ಪ್ರಯಾಣ ಬೆಳೆಸಿದ್ದಾರೆ.
ದೆಹಲಿಯಲ್ಲಿ ಇಂದು ಮುಂಜಾನೆ ದಟ್ಟ ಮಂಜು ಆವರಿಸಿಕೊಂಡಿದ್ದರಿಂದ ಅಲ್ಪ ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಹಜ ಸ್ಥಿತಿಗೆ ಮರಳಿದೆ.
ಪಕ್ಷದ ನಾಯಕರು ವಿಮಾನದಲ್ಲಿ ಕುಳಿತು ಪ್ರಯಾಣಿಸುತ್ತಿರುವ ವಿಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ನ್ಯಾಯ ಸಿಗುವವರೆಗೂ ಬಿಡುವುದಿಲ್ಲ‘ ಎಂದು ಬರೆದುಕೊಂಡಿದೆ.
ಯಾತ್ರೆ ಚಾಲನೆಗೆ ಕ್ಷಣಗಣನೆ
ಇತ್ತ ಮಣಿಪುರದ ಥೌಬಲ್ನಲ್ಲಿ ಯಾತ್ರೆಗಾಗಿ ಸಕಲ ಸಿದ್ದತೆ ನಡೆದಿದ್ದು, ಕೋಂಗ್ಜೋಮ್ ಯುದ್ಧ ಸ್ಮಾರಕದ ಬಳಿ ಆಸನಗಳನ್ನು ಸಿದ್ದಗೊಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಮುಖಂಡರು ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಯಾತ್ರೆ ಹೋಗುವ ಮಾರ್ಗದ ಬದಿ ನಾಯಕರ ದೊಡ್ಡ ದೊಡ್ಡ ಕಟೌಟ್ಗಳನ್ನು ಹಾಕಲಾಗಿದೆ. ನಾಯಕರ, ಕಾರ್ಯಕರ್ತರ ಕಾರಿನ ಮೇಲೆ ‘ನ್ಯಾಯ ಯಾತ್ರೆ’ಯ ಪೋಸ್ಟರ್ಗಳನ್ನು ಹಚ್ಚಲಾಗಿದೆ.