ನವದೆಹಲಿ (ಪಿಟಿಐ): ಮಗಧ ಪ್ರಾಂತ್ಯದಲ್ಲಿ ನಕ್ಸಲರ ಚಟುವಟಿಕೆಗಳು ಮತ್ತೆ ಆರಂಭವಾದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ನಿಷೇಧಿತ ಸಿಪಿಐಯ (ಮಾವೊವಾದಿ) ಇಬ್ಬರು ನಕ್ಸಲರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.
ರೋಹಿತ್ ರಾಯ್ ಅಲಿಯಾಸ್ ಪ್ರಕಾಶ್ ಅಲಿಯಾಸ್ ಮನೋಜ್ ಅಲಿಯಾಸ್ ಪತ್ರಕಾರ್ ಅಲಿಯಾಸ್ ಕೈಮೂರ್ನ ನೇತಾಜಿ ಹಾಗೂ ಪ್ರಮೋದ್ ಯಾದವ್ ಅಲಿಯಾಸ್ ಔರಂಗಬಾದ್ನ ಪ್ರಮೋದ್ ಕುಮಾರ್ ಎಂಬುವವರ ವಿರುದ್ಧ ಶುಕ್ರವಾರ ಪಟ್ನಾದಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಎನ್ಐಎನ ವಕ್ತಾರರು ತಿಳಿಸಿದ್ದಾರೆ.
ಉಪ ವಲಯದ ಕಮಾಂಡರ್ ಎಂಬ ರ್ಯಾಂಕ್ ಹೊಂದಿದ್ದ ರಾಯ್, ಪ್ರದೇಶದಾದ್ಯಂತ ನಕ್ಸಲ್ ವಾದ ಹಬ್ಬಿಸಲು ಹುರಿದುಂಬಿಸುತ್ತಿದ್ದ. ಜೊತೆಗೆ ಹಣ ಸಂಗ್ರಹ ಮಾಡುತ್ತಿದ್ದ ಈತ ಯುವಕರನ್ನು ಸಿಪಿಐಗೆ (ಮಾವೊವಾದಿ) ನೇಮಕಾತಿ ಮಾಡಿಕೊಳ್ಳುತ್ತಿದ್ದ ಎಂದು ಎನ್ಐಎ ಹಳಿದೆ.
ಸಿಪಿಐನ ಪಾಲಿಟ್ ಬ್ಯೂರೊ ಸದಸ್ಯನಾಗಿದ್ದ ಪ್ರಮೋದ್ ಯಾದವ್, ನಿಷೇಧಿತ ಸಂಘಟನೆಗೆ ಹಣ ಸಂಗ್ರಹಿಸುತ್ತಿದ್ದ. ಅಷ್ಟೇ ಅಲ್ಲದೆ, ಉತ್ತರ ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಮಾವೊವಾದಿ ಚಟುವಟಿಕೆಗಳನ್ನು ವಿಸ್ತರಿಸಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.