ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತೀಯರ ವಿರುದ್ಧ ಯುದ್ಧ ಘೋಷಿಸಿದ್ದು, ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರದಂದು ಗಂಭೀರ ಆರೋಪ ಮಾಡಿದೆ.
ರೈತರ ಪ್ರತಿಭಟನೆಯನ್ನು ದಮನಿಸಲು ಪ್ರಯತ್ನಿಸಿದ್ದಲ್ಲಿ ದೇಶಾದ್ಯಂತ ವ್ಯಾಪಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಬಿಜೆಪಿಯಿಂದ ಪ್ರತ್ಯಾರೋಪ ದಾಖಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮೃತಿ ಇರಾನಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ನಿಲುವುಗಳನ್ನು ಬೆಂಬಲಿಸದಿದ್ದರೆ ನಗರಗಳು ಹೊತ್ತಿ ಉರಿಯುವುದಾಗಿ ರಾಹುಲ್ ಗಾಂಧಿ ಹೇಳಿರುವುದಾಗಿ ಆರೋಪಿಸಿದರು.
ನಮ್ಮ ಪ್ರಜಾಪ್ರಭುತ್ವ ಇತಿಹಾಸದಲ್ಲಿ ರಾಜಕೀಯ ನಾಯಕರು ಶಾಂತಿಯನ್ನು ಉತ್ತೇಜಿಸುವ ಬದಲು ಹಿಂಸಾಚಾರದ ಬೆಂಕಿಯನ್ನು ಹರಡಲು ಬಯಸಿರುವುದನ್ನು ಹಿಂದೆಂದೂ ನಾವು ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರದಲ್ಲಿ ಗಾಯಗೊಂಡಿದ್ದ 400ರಷ್ಟು ಪೊಲೀಸರಿಗೆ ಸಾಂತ್ವನ ಹೇಳದಿದ್ದಕ್ಕಾಗಿ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡರು. ಇದು ನಿಜಕ್ಕೂ ಆಘಾತಕಾರಿ. ಆದರೆ ರಾಹುಲ್ ಗಾಂಧಿ ಅವರಿಂದ ಇದನ್ನೇ ನಿರೀಕ್ಷಿಸಲಾಗಿತ್ತು ಎಂದು ಹೇಳಿದರು.
ಕಾನೂನು ಸುವ್ಯವಸ್ಥೆಯನ್ನು ಒಡೆಯುವುದಷ್ಟೇ ಅಲ್ಲದೆ ತ್ರಿವರ್ಣ ಧ್ವಜವನ್ನು ಅವಮಾನಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಯಸುತ್ತಾರೆ ಎಂದು ಹೇಳಿದರು.
ದೆಹಲಿಯಲ್ಲಿ ಪೊಲೀಸರು ಸಂಯಮವನ್ನು ಪಾಲಿಸಿರುವುದರಿಂದ ಶವಗಳ ರಾಶಿ ಬೀಳದೇ ಇರುವುದಕ್ಕೆ ರಾಹುಲ್ ಗಾಂಧಿ ಅಸಮಾಧಾನಗೊಂಡಿದ್ದಾರೆ. ಅದಕ್ಕಾಗಿ ಸ್ವತಃ ದೇಶದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮೊದಲು ಹೇಳಿಕೆ ನೀಡಿರುವ ರಾಹುಲ್ ಗಾಂಧಿ, ಕೃಷಿ ಕಾಯ್ದೆಗಳನ್ನು ಕಸದ ಬುಟ್ಟಿಗೆ ಎಸೆಯುವುದೊಂದೇ ಏಕೈಕ ಪರಿಹಾರ. ಇಲ್ಲವಾದ್ದಲ್ಲಿ ಆಂದೋಲನ ದೇಶದೆಲ್ಲೆಡೆ ವ್ಯಾಪಿಸಲಿದೆ ಎಂದು ಎಚ್ಚರಿಸಿದ್ದರು.