ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ತೊಲಗಿಸಿ, ಬೇಟಿ ರಕ್ಷಿಸಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
Published 8 ಮಾರ್ಚ್ 2024, 14:14 IST
Last Updated 8 ಮಾರ್ಚ್ 2024, 14:14 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ? ಬಿಜೆಪಿ ಸಂಸದನ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದರೂ, ‘ಮೌನ’ವಾಗಿರುವುದು ಏಕೆ... ಈ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ದೇಶದಾದ್ಯಂತ ಮಹಿಳೆಯರು ಕೋರುತ್ತಿದ್ದಾರೆ’ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶುಕ್ರವಾರ ವಾಗ್ದಾಳಿ ನಡೆಸಿದೆ.

‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರಧಾನಿಯು ಮಹಿಳೆಯರಿಗೆ ನಮಸ್ಕಾರ ಮಾಡುವುದನ್ನು ಬಿಟ್ಟು, ಬೇರೆ ಇನ್ನೇನನ್ನೋ ಮಾಡುತ್ತಾರೆ ಎಂದು ನಾವು ನಿರೀಕ್ಷಿಸುವುದಿಲ್ಲ. ಬಿಜೆಪಿ ತೊಲಗಿಸಿ, ಬೇಟಿ ರಕ್ಷಿಸಿ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕುಟುಕಿದ್ದಾರೆ. 

‘ಅದೇನೇ ಇದ್ದರೂ ದೇಶದಾದ್ಯಂತ ಮಹಿಳೆಯರು ಕೇಳುತ್ತಿರುವ ಕೆಲವು ಪ್ರಮುಖ ಪ್ರಶ್ನೆಗಳು ಇಲ್ಲಿವೆ. ಕಳೆದೊಂದು ವರ್ಷದಿಂದಲೂ ಸಂಘರ್ಷಪೀಡಿತವಾಗಿರುವ ಮಣಿಪುರದಲ್ಲಿ ಮಹಿಳೆಯರೇ ಹೆಚ್ಚು ಬಲಿಪಶುಗಳಾಗಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ನಡೆಸಿದ ವಿಡಿಯೊ ಸಹ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಕೇಂದ್ರ–ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ, ಅಲ್ಲಿಗೆ ಭೇಟಿ ನೀಡಲು ಪ್ರಧಾನಿಗೆ ಏನು ತೊಂದರೆಯಾಗಿತ್ತು’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ ವೇದಿಕೆಯಲ್ಲಿ ಕೇಳಿದ್ದಾರೆ.

‘ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ವಿರುದ್ಧ ಮಹಿಳಾ ಕುಸ್ತಿಪಟುಗಳು ಮಾಡಿದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರಧಾನಿಯ ಮೌನ ಎದ್ದು ಕಾಣುತ್ತಿದೆ. ಸಿಂಗ್ ಅವರನ್ನು ‘ಮೋದಿ ಪರಿವಾರದ ಸದಸ್ಯ’ ಎಂದು ಪರಿಗಣಿಸಿದ್ದಾರೆಯೇ’ ಎಂದೂ ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT