ನವದೆಹಲಿ: ಬಿಜೆಪಿ ಅಧಿಕಾರದಲ್ಲಿರುವ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳು ಕಾಂಗ್ರೆಸ್ ಪಾಲಾಗಲಿವೆ ಎಂದು ಚುನಾವಣಾ ಪೂರ್ವ ಜನಮತ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲೇ ಹೊರಬಿದ್ದಿರುವ ಸಮೀಕ್ಷೆಗಳು ಬಿಜೆಪಿಗೆ ಆಘಾತಕಾರಿ ಸುದ್ದಿ ನೀಡಿವೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಎಬಿಪಿ ಸುದ್ದಿಸಂಸ್ಥೆ– ಸಿ ವೋಟರ್ ಮತ್ತು ಸಿ–ಫೋರ್ ಪ್ರತ್ಯೇಕವಾಗಿ ನಡೆಸಿರುವ ಸಮೀಕ್ಷೆಗಳು ಸ್ಪಷ್ಟವಾಗಿ ಹೇಳಿವೆ.
ಎರಡೂ ಪಕ್ಷಗಳ ಮತಗಳಿಕೆ ಪ್ರಮಾಣದಲ್ಲೂ ಭಾರಿ ಏರುಪೇರಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಸುಳಿವು ನೀಡಿವೆ.
15 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿರುವ ಮಧ್ಯ ಪ್ರದೇಶ, ಛತ್ತೀಸಗಡ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಪೈಪೋಟಿ ಕಾಣುತ್ತಿದೆ. ಆದರೂ, ಕಾಂಗ್ರೆಸ್ ಸ್ವಲ್ಪ ಮುನ್ನಡೆ ಸಾಧಿಸಲಿದೆ. ಮತಗಳಿಕೆ ಪ್ರಮಾಣದಲ್ಲೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.
ಸಿ–ಫೋರ್ ಸಮೀಕ್ಷೆ ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿದೆ. ಎಬಿಪಿ ಸುದ್ದಿಸಂಸ್ಥೆ ಮತ್ತು ಸಿ–ವೋಟರ್ ಸಂಸ್ಥೆ ಮೂರೂ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿವೆ.
ಪೈಲಟ್, ಚೌಹಾಣ್,ರಮಣ್ ಸಿಂಗ್ ಪರ ಒಲವು
ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ವಸುಂಧರಾ ರಾಜೆ ಸಿಂಧಿಯಾ ಅವರಿಗಿಂತ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಸೂಕ್ತ ಎಂದು ಹೆಚ್ಚಿನ ಜನರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೂರನೇ ಕ್ರಮಾಂಕದಲ್ಲಿದ್ದಾರೆ.
ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಮಣ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.