ನವದೆಹಲಿ: ಮಂಗಳವಾರ ದಿಢೀರ್ ದೆಹಲಿಗೆ ಬಂದಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಸಂಜೆ ಇಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಮಧ್ಯಾಹ್ನ ಎರಡೂವರೆಗೆ ಬೆಂಗಳೂರಿನಿಂದ ಇಲ್ಲಿಗೆ ಬಂದ ಅವರು, ಫಡಣವಿಸ್ ಅವರನ್ನು ಇಲ್ಲಿರುವ ಆರ್ಎಸ್ಎಸ್ ಮುಖಂಡರೊಬ್ಬರ ಮನೆಯಲ್ಲಿ ಭೇಟಿ ಮಾಡಿ 45 ನಿಮಿಷ ಚರ್ಚಿಸಿದರು.
ಕಳೆದ ವಾರ ಮುಂಬೈನಲ್ಲಿ ಫಡಣವಿಸ್ ಅವರನ್ನು ಜಾರಕಿಹೊಳಿ ಭೇಟಿ ಮಾಡಿದ್ದರು. ಭೇಟಿಯ ವೇಳೆ ಯಾವ ವಿಷಯ ಚರ್ಚಿಸಲಾಗಿದೆ ಎಂಬುದು ಗೊತ್ತಾಗಿಲ್ಲ.
ತಮ್ಮ ವಿರುದ್ಧದ ತನಿಖೆ ಪೂರ್ಣಗೊಳಿಸಿ, ಕ್ಲೀನ್ ಚಿಟ್ ನೀಡುವ ಮೂಲಕ ಮತ್ತೆ ಸಚಿವ ಸ್ಥಾನ ಕೊಡಿಸಬೇಕು ಎಂದು ಅವರು ಫಡಣವಿಸ್ ಅವರಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿ ಭೇಟಿಯ ವೇಳೆ ಅವರು ಬಿಜೆಪಿಯ ಇನ್ನೂ ಕೆಲವು ಮುಖಂಡರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.