ಮುಂಬೈ: ಇದೇ 20ರ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸುವ ಸಲುವಾಗಿ ಜಾಮೀನು ನೀಡಬೇಕೆಂದು ಕೋರಿ ಎನ್ಸಿಪಿ ಶಾಸಕರಾದ ಅನಿಲ್ ದೇಶಮುಖ್, ನವಾಬ್ ಮಲಿಕ್ ಸಲ್ಲಿಸಿದ್ದ ಅರ್ಜಿಯನ್ನೂ ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಅದಾಗಿಯೂ ಹತ್ತು ಸ್ಥಾನಗಳ ಪೈಕಿ ಆರು ಸ್ಥಾನ ಗೆಲ್ಲುವುದಾಗಿ ಮಹಾ ವಿಕಾಸ್ ಅಘಾಡಿ ವಿಶ್ವಾಸ ವ್ಯಕ್ತಪಡಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮೂಲಕ ಜಾರಿ ನಿರ್ದೇಶನಾಲಯವು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 62(5) ಉಲ್ಲೇಖಿಸಿ ಮನವಿಯನ್ನು ವಿರೋಧಿಸಿತು. ಜೂನ್ 10ರಂದು ನಡೆದ ರಾಜ್ಯಸಭಾ ಚುನಾವಣೆ ವೇಳೆಯೂ ಈ ಇಬ್ಬರೂ ಜಾಮೀನು ಪಡೆಯಲು ಸಾಧ್ಯವಾಗಿರಲಿಲ್ಲ.
ವಿಚಾರಣೆ ಸಂದರ್ಭದಲ್ಲಿ ದೇಶಮುಖ್, ಮಲ್ಲಿಕ್ ಅವರ ವಕೀಲರು, ಶಾಸಕರಿಬ್ಬರೂ ಮತ ಚಲಾಯಿಸುವ ಪ್ರಕ್ರಿಯೆಯಿಂದ ಅನರ್ಹರಾಗಿಲ್ಲ ಅಥವಾ ಅಪರಾಧಿಗಳೆಂದು ಸಾಬೀತಾಗಿಲ್ಲ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.