ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ| BJP ಸರ್ಕಾರದ ಅವಧಿಯಲ್ಲಿ ಬ್ರಾಹ್ಮಣರಿಗೆ ಕಿರುಕುಳ: ಮಾಯಾವತಿ ಆರೋಪ

Published 23 ಮೇ 2024, 13:05 IST
Last Updated 23 ಮೇ 2024, 13:05 IST
ಅಕ್ಷರ ಗಾತ್ರ

ಮಿರ್ಜಾಪುರ: ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೇಲ್ಜಾತಿಗಳಿಗೆ ಸೇರಿದ ಬಡವರ ಸ್ಥಿತಿ ಉತ್ತಮವಾಗಿಲ್ಲ. ವಿಶೇಷವಾಗಿ ಬ್ರಾಹ್ಮಣರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

ಗುರುವಾರ ಬಿಎಸ್‌ಪಿ ಅಭ್ಯರ್ಥಿ ಮನೀಶ್ ತಿವಾರಿ ಪರ ಮಿರ್ಜಾಪುರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 'ರಾಜ್ಯದಲ್ಲಿ ಹಿಂದುತ್ವದ ಸೋಗಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಿವೆ. ಕಾಂಗ್ರೆಸ್‌ನಂತೆ ಬಿಜೆಪಿ ಕೂಡ ತಪ್ಪು ನೀತಿಗಳನ್ನು ಅನುಸರಿಸುತ್ತಿದೆ' ಎಂದಿದ್ದಾರೆ.

'ಹಿಂದುತ್ವದ ನೆಪದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚಿವೆ. ಇದರ ಜೊತೆಗೆ ಮೇಲ್ವರ್ಗದ ಬಡವರ ಸ್ಥಿತಿಯೂ ಅಷ್ಟೇನೂ ಉತ್ತಮವಾಗಿಲ್ಲ. ಅದರಲ್ಲೂ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ನೀಡಲಾಗುತ್ತಿದೆ' ಎಂದು ಅವರು ದೂರಿದ್ದಾರೆ.

ಬಿಜೆಪಿ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಬಡತನ, ನಿರುದ್ಯೋಗ ಮತ್ತು ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಭ್ರಷ್ಟಾಚಾರ ಮಾತ್ರ ಇನ್ನೂ ಕೊನೆಗೊಂಡಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಿಎಸ್‌ಪಿ ಅಧಿಕಾರಕ್ಕೆ ಬಂದರೆ 'ಸರ್ವಜನ್ ಹಿತಾಯ, ಸರ್ವಜನ್ ಸುಖಾಯ' (ಸರ್ವರ ಹಿತ, ಸರ್ವರ ಕಲ್ಯಾಣ) ನೀತಿಯಡಿ ಕೆಲಸ ಮಾಡಲಿದೆ. ಈ ಮೂಲಕ ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಅವರ ಕನಸನ್ನು ನನಸಾಗಿಸಬಹುದು ಎಂದು ಅವರು ಹೇಳಿದ್ದಾರೆ.

ಮಿರ್ಜಾಪುರದಲ್ಲಿ ಜೂನ್ 1 ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT