ನವದೆಹಲಿ: ಬಿಜೆಪಿಯ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ (55) ಅವರ ಸಾವಿನಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಡಿಸೆಂಬರ್ 1ರಂದು ಚುನಾವಣೆ ನಿಗಿದಿಯಾಗಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.
ರಾಯಚೂರಿನ ಬಿಜೆಪಿ ಮುಖಂಡ ಅಶೋಕ್ ಗಸ್ತಿ ಕೋವಿಡ್–19 ಮತ್ತು ಬಹು ಅಂಗಾಂಗಳ ವೈಫಲ್ಯದಿಂದ ಸೆಪ್ಟೆಂಬರ್ನಲ್ಲಿ ಮೃತಪಟ್ಟರು. ಇದೇ ಜುಲೈನಲ್ಲಿ ಸಂಸತ್ ಸದಸ್ಯರಾಗಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು.
ಡಿಸೆಂಬರ್ 1ರಂದು ಚುನಾವಣೆ ನಿಗದಿಯಾಗಿದ್ದು, ಅಂದು ಸಂಜೆಯೇ ಮತ ಎಣಿಕೆ ನಡೆಯಲಿದೆ. ಚುನಾವಣೆ ಸಂಬಂಧ ನವೆಂಬರ್ 11ರಂದು ಅಧಿಸೂಚನೆ ಹೊರಬರಲಿದೆ ಹಾಗೂ ನಾಮನಿರ್ದೇಶನ ಸಲ್ಲಿಕೆಗೆ ನವೆಂಬರ್ 18 ಕೊನೆಯ ದಿನವಾಗಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.